ಹೊಸದಿಗಂತ ವರದಿ,ನಂಜನಗೂಡು
ತಾಲೂಕಿನ ಹೆಡಿಯಾಲ ಸಮೀಪದ ಈರೇಗೌಡನಹುಂಡಿ ಬಳಿ ಶಾಲಾ ಮಕ್ಕಳು ಸಂಚರಿಸುತ್ತಿದ್ದ ಖಾಸಗೀ ಸರಕು ಸಾಗಾಣೆ ವಾಹನವೊಂದು ಪಲ್ಟಿಯಾಗಿ 9 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ ಬಳ್ಳೂರು ಹುಂಡಿ, ನಾಗಣಾಪುರ ಹಾಗೂ ಮಹದೇವನಗರದಿಂದ ಹಡಿಯಾಲ ಗ್ರಾಮದ ಪ್ರೌಢಶಾಲೆಗೆ ತೆರಳಲು 9 ಮಂದಿ ವಿದ್ಯಾರ್ಥಿಗಳು ಖಾಸಗೀ ಡೈರಿಯೊಂದರ ನಾಲ್ಕು ಚಕ್ರದ ಹಾಲಿನ ವಾಹನವನ್ನು ಏರಿದ್ದಾರೆ. ಸರಕು ಸಾಗಾಣೆ ಆಟೋ ಈರೇಗೌಡನಹುಂಡಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಯಂಚಿನಲ್ಲಿ ಉರುಳಿದ್ದರಿಂದ ವಾಹನದಲ್ಲಿದ್ದ ಅನಷ, ಬೇಬಿ, ಮಿಲನ, ಕೌಶಲ್ಯ, ಅಂಜಲಿ, ಕುಮಾರಿ, ವಿನೋದ, ಸೋಮಣ್ಣ ಹಾಗೂ ಮಣಿಕಂಠ ಎಂಬ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇನ್ನು ಇದೇ ವಾಹನದಲ್ಲಿ ಸಂಚರಿಸುತ್ತಿದ್ದ ಬಳ್ಳೂರುಹುಂಡಿಯ ನಿವಾಸಿಗಳಾದ ಉದಯ್ ಹಾಗೂ ಮಹೇಶ ಎಂಬುವರೂ ಅವಘಡದಲ್ಲಿ ಗಾಯಗೊಂಡಿದ್ದಾರೆ.
ಈ ಸಂದರ್ಭ ಸ್ಥಳಕ್ಕಾಗಮಿಸಿದ ಸ್ಥಳೀಯರು ತಕ್ಷಣ ತುರ್ತು ವಾಹನದಲ್ಲಿ ಗಾಯಾಳುಗಳನ್ನು ಹೆಡಿಯಾಲ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ತೀವ್ರವಾಗಿ ಗಾಯಗೊಂಡಿದ್ದ ಮೂವರನ್ನು ಮೈಸೂರಿನಕೆ.ಆರ್.ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಹುಲ್ಲಹಳ್ಳಿ ಪೊಲೀಸ್ಠಾಣೆಯ ಪಿಎಸೈ ರಮೇಶ್ ಕರಕಿಕಟ್ಟೆ ಹಾಗೂ ಸಿಬ್ಬಂದಿಗಳು ಮಹಜರು ನಡೆಸಿ ಅಪಘಾತಕ್ಕೀಡಾಗಿರುವ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತ ಸಂಬವಿಸಿದ ಬಳಿಕ ಚಾಲಕ ಸ್ಥಳದಿಂದ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ..