ಹೊಸದಿಗಂತ ಡಿಜಿಟಲ್ ಡೆಸ್ಕ್
ಒರಿಸ್ಸಾದಲ್ಲಿ ವಿಚಿತ್ರ ಪ್ರಸಂಗವೊಂದು ನಡೆದಿದೆ. ʼಮದುವೆ ಬಗ್ಗೆ ಯಾರೂ ಮಾಹಿತಿ ನೀಡಲಿಲ್ಲʼ ಎಂಬ ಕಾರಣಕ್ಕೆ ಶಾಸರೊಬ್ಬರು ತನ್ನ ಸ್ವಂತ ಮದುವೆಗೆ ಗೈರುಹಾಜರಾಗಿದ್ದಾರೆ!.
ಒರಿಸ್ಸಾದ ಬಿಜೆಡಿ ಶಾಸಕ ಬಿಜಯ್ ಶಂಕರ್ ದಾಸ್ ತಮ್ಮ ಮದುವೆಗೆ ಬಾರದ ಹಿನ್ನೆಲೆಯಲ್ಲಿ ಶನಿವಾರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?
ತಿರ್ತೋಲ್ ಕ್ಷೇತ್ರದ ಶಾಸಕ ಬಿಜಯ್ ಶಂಕರ್ ದಾಸ್( 30ವರ್ಷ) ಮೂರು ವರ್ಷಗಳಿಂದ ತನ್ನೊಂದಿಗೆ ಸಂಬಂಧ ಇರಿಸಿಕೊಂಡಿದ್ದರು ಎಂದು ಯುವತಿ ಹೇಳಿಕೊಂಡಿದ್ದು, ನಿಗದಿತ ದಿನಾಂಕದಂದು ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಅದರಂತೆ ಮೇ 17 ರಂದು ವಧು-ವರರು ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದರು. ನಿಗದಿತ 30 ದಿನಗಳ ನಂತರ ಶುಕ್ರವಾರ ಮದುವೆಯ ವಿಧಿವಿಧಾನಗಳಿಗಾಗಿ ಯುವತಿ ತನ್ನ ಕುಟುಂಬದೊಂದಿಗೆ ಅಲ್ಲಿಗೆ ತಲುಪಿದ್ದರು. ಆದರೆ ಶಾಸಕ ಮಾತ್ರ ಅಲ್ಲಿಗೆ ಬರಲೇ ಇಲ್ಲ.
ವರನಿಗಾಗಿ ಕಾದು ಬೇಸತ್ತ ಯುವತಿಯ ಕುಟುಂಬ ಆಕ್ರೋಶಗೊಂಡಿದೆ. ಈ ಬಗ್ಗೆ ಪ್ರಶ್ನಿಸಿದರೆ ಶಾಸಕ ಬೇರೆಯದ್ದೇ ಉತ್ತರ ನೀಡಿದ್ದಾರೆ.
ಇದರಿಂದ ಕಂಗಾಲಾದ ವಧು ಶಾಸಕ ಬಿಜಯ್ ಶಂಕರ್ ದಾಸ್ ವಿರುದ್ಧ ಜಗತ್ಸಿಂಗ್ಪುರ ಸದರ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾಳೆ.
ಬಿಜಯ್ ಶಂಕರ್ ದಾಸ್ ಈ ಬಗ್ಗೆ ಪ್ರತಿಕ್ರಿಯಿಸಿ, ನಾನು ಆಕೆಯನ್ನು ಮದುವೆಯಾಗುವುದನ್ನು ನಿರಾಕರಿಸಿಲ್ಲ ಎಂದು ಹೇಳಿದ್ದಾರೆ.
“ಮದುವೆ ನೋಂದಣಿಗೆ ಇನ್ನೂ 60 ದಿನಗಳು ಇವೆ. ಆದ್ದರಿಂದ ನಾನು ಬಂದಿಲ್ಲ. ಮದುವೆ ರಿಜಿಸ್ಟ್ರಾರ್ ಕಚೇರಿಗೆ ಹೋಗಲು ಆಕೆ ಅಥವಾ ಆಕೆಯ ಕುಟುಂಬಸ್ಥರು ನನಗೆ ಮಾಹಿತಿ ತಿಳಿಸಲಿಲ್ಲ” ಎಂದು ಹೇಳಿದ್ದಾರೆ.
ಶಾಸಕನ ಸಹೋದರ ಮತ್ತು ಇತರ ಕುಟುಂಬ ಸದಸ್ಯರು ನನಗೆ ಬೆದರಿಕೆ ಹಾಕುತ್ತಿದ್ದಾರೆ, ಅವರು ತಮ್ಮ ಭರವಸೆಯನ್ನು ಉಳಿಸಿಕೊಳ್ಳಲಿಲ್ಲ ಮತ್ತು ಅವರು ನನ್ನ ಫೋನ್ ಕರೆಗಳಿಗೆ ಪ್ರತಿಕ್ರಿಯಿಸುತ್ತಿಲ್ಲ” ಎಂದು ವಧು ಆರೋಪಿಸಿದ್ದಾಳೆ.
ಶಾಸಕನ ವಿರುದ್ಧ IPC ಸೆಕ್ಷನ್ 420 (ವಂಚನೆ), 195A (ಯಾವುದೇ ವ್ಯಕ್ತಿಗೆ ಸುಳ್ಳು ಸಾಕ್ಷ್ಯ ನೀಡುವಂತೆ ಬೆದರಿಕೆ ಹಾಕುವುದು), 294 (ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು), 509 (ಮಹಿಳೆಯರ ಗೌರವವನ್ನು ಅವಮಾನಿಸುವ ಉದ್ದೇಶದಿಂದ ಪದ, ಸನ್ನೆ ಅಥವಾ ಕೃತ್ಯ), 341 ( ತಪ್ಪು ಸಂಯಮಕ್ಕಾಗಿ ಶಿಕ್ಷೆ), 120 ಬಿ (ಅಪರಾಧದ ಪಿತೂರಿಯ ಶಿಕ್ಷೆ) ಮತ್ತು 34 (ಸಾಮಾನ್ಯ ಉದ್ದೇಶದ ಮುಂದುವರಿಕೆಗಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.