ಹೊಸದಿಗಂತ ಡಿಜಿಟಲ್ ಡೆಸ್ಕ್:
ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ನಿರ್ಬಂಧಿತ ವಲಯದಲ್ಲಿ ಓಪನ್ ಜೀಪ್ನಲ್ಲಿ ಸಂಚರಿಸುತ್ತಿದ್ದ ನಾಲ್ವರು ಯುವಕರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ. ಯುವಕರ ಗುಂಪು ಆನೆಗಳ ಹಿಂಡನ್ನು ಕೆಣಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಒಳಭಾಗದಲ್ಲಿ ನಿರ್ಬಂಧಿತ ಪ್ರದೇಶವಿದೆ. ಇಲ್ಲಿಗೆ ನಾಲ್ವರು ಯುವಕರು ತಮ್ಮ ಖಾಸಗಿ ವಾಹನದಲ್ಲಿ ಪ್ರವೇಶ ಪಡೆದಿದ್ದಾರೆ. ವನ್ಯಜೀವಿಗಳನ್ನು ಕೆಣಕುವ ವಿಡಿಯೋವೊಂದು ವೈರಲ್ ಆಗಿದೆ. ಇದಾದ ನಂತರ ಅರಣ್ಯ ಇಲಾಖೆ ತನಿಖೆ ಆರಂಭಿಸಿದ್ದು, ಪ್ರಕರಣ ದಾಖಲಿಸಿದೆ.
ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಪುಲ್ಕಿತ್ ಮೀನಾ ಅವಪು ಹಾಗೂ ಆರೋಪಿಗಳ ಪೈಕಿ ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಮೂವರಿಗಾಗಿ ಶೋಧ ಮುಂದುವರಿದಿದೆ. ಭದ್ರಾವತಿಯ ನಿವಾಸಿಗಳಾದ ಆರೋಪಿಗಳು ಮರಡಿಬ್ಬ ಗ್ರಾಮಕ್ಕೆ ಹೋಗುವಾಗ ದಾರಿ ಬದಲಿಸಿ ಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶಕ್ಕೆ ಪ್ರವೇಶ ಮಾಡಿದ್ದಾರೆ.
ಮರಡಿಬ್ಬ ಗ್ರಾಮಕ್ಕೆ ತೆರಳುವ ರಸ್ತೆ ಸ್ಥಳೀಯ ನಿವಾಸಿಗಳ ಬಳಕೆಗೆ ಮಾತ್ರ ತೆರೆಯಲಾಗಿದ್ದು, ಇತರೆ ಉದ್ದೇಶಗಳಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ಇತ್ತೀಚೆಗೆ ಹಿನ್ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಕೆಲವು ಪ್ರದೇಶಗಳಲ್ಲಿ ವಾಹನ ಸಂಚಾರ ಸಾಧ್ಯವಾಗಿದ್ದು, ಅದನ್ನೇ ದುರುಪಯೋಗಪಡಿಸಿಕೊಂಡು ಆರೋಪಿಗಳು ಒಳನುಗ್ಗಿದ್ದಾರೆ.
ಇವರು ಸಾಮಾನ್ಯ ಪ್ರವೇಶ ಮಾರ್ಗದಿಂದ ಅಲ್ಲದೆ, ಎನ್.ಆರ್.ಪುರ ಅರಣ್ಯ ವಲಯದ ವ್ಯಾಪ್ತಿಯಲ್ಲಿರುವ ಪ್ರದೇಶದ ಮೂಲಕ ಪ್ರವೇಶಿಸಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.



