ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಅಧಿಕಾರಿಯೊಬ್ಬರು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು, ಪಡೆದ ಲಂಚದ ಹಣವನ್ನು ನುಂಗಿದ ಘಟನೆ ಮಧ್ಯಪ್ರದೇಶ ರಾಜ್ಯದಲ್ಲಿ ನಡೆದಿದೆ.
ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಕಂದಾಯ ಇಲಾಖೆಯ ಪಟ್ವಾರಿ ಗಜೇಂದ್ರ ಸಿಂಗ್ ಭೂ ಪ್ರಕರಣದಲ್ಲಿ ದೂರುದಾರ ಚಂದನ್ ಸಿಂಗ್ ಲೋಧಿಯಿಂದ 5 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಚಾರ ಕುರಿತಂತೆ ಲೋಧಿ ಜಬಲ್ಪುರ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ತನಿಖೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಬಿಲಹಾರಿ ಗ್ರಾಮದಲ್ಲಿರುವ ಪಟ್ವಾರಿ ಗಜೇಂದ್ರ ಸಿಂಗ್ ಅವರ ಖಾಸಗಿ ಕಚೇರಿಗೆ ತಲುಪಿದ ವೇಳೆ, ಚಂದನ್ ಸಿಂಗ್ನಿಂದ 4,500 ರೂಪಾಯಿ ಪಡೆದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅಧಿಕಾರಿಗಳನ್ನು ಕಂಡ ಕೂಡಲೇ ಪಟ್ವಾರಿ ಗಜೇಂದ್ರ ಸಿಂಗ್ ಲಂಚದ ಹಣವನ್ನು ಜಗಿದು ನುಂಗಿದ್ದಾನೆ.
ಕೂಡಲೇ ಲೋಕಾಯುಕ್ತ ಅಧಿಕಾರಿಗಳು ಪಟ್ವಾರಿಯನ್ನು ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಸ್ಥಳಾಂತರಿಸಿದರು. ಆಸ್ಪತ್ರೆಯ ವೈದ್ಯರು ಪಟ್ವಾರಿ ಬಾಯಿಯಿಂದ ಲಂಚದ ನೋಟುಗಳನ್ನು ಹೊರತೆಗೆದು. ಚಿಕಿತ್ಸೆ ನೀಡಿದರು. ನೋಟುಗಳ ತಿರುಳನ್ನು ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡು, ಪಟ್ವಾರಿ ವಿರುದ್ಧ ತನಿಖೆ ಕೈಗೊಂಡಿದ್ದಾರೆ.