ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮದ್ಯ ನೀತಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ಎದುರಿಸುತ್ತಿರುವ ಆಪ್ ಮುಖಂಡ ಮತ್ತು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ತಮ್ಮ ಪಕ್ಷ ಸೇರಿದರೆ ಎಲ್ಲಾ ಕೇಸ್ ಗಳನ್ನು ಮುಚ್ಚಲಾಗುವುದು ಎಂದು ಬಿಜೆಪಿಯಿಂದ ಆಫರ್ ಬಂದಿದೆ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ಬಿಜೆಪಿಗೆ ಸೇರಿದರೆ ತಮ್ಮ ವಿರುದ್ಧದ ಸಿಬಿಐ ಮತ್ತು ಇಡಿ ಪ್ರಕರಣಗಳನ್ನು ಮುಚ್ಚಲಾಗುವುದು ಎಂಬ ಸಂದೇಶವನ್ನು ಬಿಜೆಪಿಯಿಂದ ಸ್ವೀಕರಿಸಲಾಗಿದೆ. ಆದರೆ ತಲೆ ಕಡಿದರೂ ಬಿಜೆಪಿಯೊಂದಿಗೆ ಸೇರುವುದಿಲ್ಲ ಎಂದು ಸಿಸೋಡಿಯಾ ಹೇಳಿಕೊಂಡಿದ್ದಾರೆ.
ಸಿಬಿಐ ದಾಳಿಯ ವಿವಾದದ ನಡುವೆ ಮನೀಷ್ ಸಿಸೋಡಿಯಾ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಗುಜರಾತ್ಗೆ ಭೇಟಿ ನೀಡಲಿದ್ದಾರೆ. ದಾಳಿಯ ನಂತರ ರಾಷ್ಟ್ರ ರಾಜಧಾನಿಯ ಹೊರಗೆ ಇದು ಅವರ ಮೊದಲ ಪ್ರವಾಸವಾಗಿದೆ.
ದೆಹಲಿ ಮತ್ತು ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಕೆಲಸವನ್ನು ಎಲ್ಲರೂ ನೋಡಬಹುದು. ಗುಜರಾತ್ನ ಜನರು ಕೂಡ ಇದರಿಂದ ಪ್ರೇರಿತರಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಕಳೆದ 27 ವರ್ಷಗಳಲ್ಲಿ ಏನನ್ನೂ ಮಾಡಿಲ್ಲ. ಜನರು ಕೇಜ್ರಿವಾಲ್ಗೆ ಅವಕಾಶ ನೀಡಬೇಕು ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ.