July 19, 2026
Sunday, July 19, 2026
spot_img

ಶಾಂತಿಯುತವಾಗಿ ಫುಟ್ಬಾಲ್ ಸಂಭ್ರಮಿಸಿ: ಕ್ರೀಡಾಭಿಮಾನಿಗಳಿಗೆ ಸಿಎಂ ಕಿವಿಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ರಾಜ್ಯದ ಯುವಜನತೆ ಮತ್ತು ಕ್ರೀಡಾ ಅಭಿಮಾನಿಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಿಹಿ ಸುದ್ದಿ ನೀಡಿದ್ದಾರೆ. ಸಾರ್ವಜನಿಕರ ಮನವಿಯನ್ನು ಪುರಸ್ಕರಿಸಿ, ಇಂದು ತಡರಾತ್ರಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ನೇರ ಪ್ರಸಾರ ವೀಕ್ಷಿಸಲು ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಿಗೆ ಬೆಳಗಿನ ಜಾವ 3:30ರವರೆಗೆ ತೆರೆಯಲು ವಿಶೇಷ ರಿಯಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಶಾಂತಿ ಕಾಪಾಡಲು ಸಿಎಂ ಡಿಕೆಶಿ ಕಡಕ್ ಸೂಚನೆ

ವಿಧಾನಸೌಧದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಪಂದ್ಯದ ಫಲಿತಾಂಶ ಏನೇ ಇರಲಿ, ಅಭಿಮಾನಿಗಳು ಸಂಭ್ರಮಾಚರಣೆ ನೆಪದಲ್ಲಿ ಕಾನೂನು ಕೈಗೆತ್ತಿಕೊಳ್ಳಬಾರದು. ಸಾರ್ವಜನಿಕರು ಮತ್ತು ಯುವಕರು ತಾಳ್ಮೆಯಿಂದ, ಶಾಂತಿಯುತವಾಗಿ ಪಂದ್ಯವನ್ನು ಆನಂದಿಸಬೇಕು ಎಂದು ಕೋರಿದ್ದಾರೆ. ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸರು ಈಗಾಗಲೇ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ನಿಗಾ ಇರಿಸಿದ್ದಾರೆ ಎಂದು ಎಚ್ಚರಿಸಿದ್ದಾರೆ.

ವಿರಾಮವಿಲ್ಲದ ಬರ ಪರಿಸ್ಥಿತಿ ಪರಾಮರ್ಶೆ

ಇದೇ ವೇಳೆ ರಾಜ್ಯದ ತೀವ್ರ ಬರ ಪರಿಸ್ಥಿತಿಯ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, ಸರ್ಕಾರಕ್ಕೆ ಭಾನುವಾರ ಅಥವಾ ಯಾವುದೇ ರಜಾದಿನಗಳು ಅನ್ವಯಿಸುವುದಿಲ್ಲ. ಸಚಿವರು, ಜಿಲ್ಲಾಧಿಕಾರಿಗಳು (DC) ಹಾಗೂ ಪೊಲೀಸ್ ಇಲಾಖೆ ದಿನದ 24 ಗಂಟೆಯೂ ಕರ್ತವ್ಯ ನಿರತರಾಗಿರಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಬರ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಲು ಡಿಸಿ ಹಾಗೂ ಸಿಇಒಗಳೊಂದಿಗೆ ನಿರಂತರ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !