ಇನ್ನು ಮುಂದೆ ಯುಗಾದಿ ರಾಜ್ಯಾದ್ಯಂತ ಧಾರ್ಮಿಕ ದಿನವಾಗಿ ಆಚರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು:
ಹಿಂದುಗಳ ಹೊಸ ವರ್ಷದ ಮೊದಲ ದಿನವಾದ ಯುಗಾದಿಯ ದಿನವನ್ನು ಧಾರ್ಮಿಕ ದಿನವನ್ನಾಗಿ ವಿಶೇಷವಾಗಿ ಆಚರಿಸುವಂತೆ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಿಗೆ ಸುತ್ತೋಲೆ ಹೊರಡಿಸುವಂತೆ ಹಿಂದು ಧಾರ್ಮಿಕ ದತ್ತಿ ಸಚಿವೆ ಶಶಿಕಲಾ ಜೊಲ್ಲೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಜ್ಯದಲ್ಲಿರುವ ಅನೇಕ ಇಲಾಖೆಗಳು ತಮ್ಮ ಇಲಾಖೆಗೆ ಸಂಬಂಧಿಸಿದಂತೆ, ಧ್ಯೇಯೋದ್ದೇಶಗಳನ್ನು ಹೊಂದುವ ಹೆಸರಿನೊಂದಿಗೆ ವರ್ಷದ ಒಂದು ದಿನವನ್ನು ಇಲಾಖೆಯ ದಿನಾಚರಣೆಯನ್ನು ಆಚರಿಸುತ್ತಾರೆ. ಅದೇ ರೀತಿ ಧಾರ್ಮಿಕ ದತ್ತಿ ಇಲಾಖೆಯೂ ಕೂಡಾ ಧಾರ್ಮಿಕ ಹಿನ್ನೆಲೆ ಮತ್ತು ಮನೋಭಾವವನ್ನು ಹೊಂದಿರುವ ಇಲಾಖೆಯಾಗಿರುವುದರಿಂದ ವರ್ಷದಲ್ಲಿ ಒಂದು ದಿನವನ್ನು ಧಾರ್ಮಿಕ ದಿನವೆಂಬ ಹೆಸರಿನಿಂದ ಆಚರಣೆ ಮಾಡುವುದು ಸೂಕ್ತ. ಆದರೆ ರಾಜ್ಯದ ಕೆಲವು ಭಾಗಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಇನ್ನು ಕೆಲವು ಭಾಗಗಳಲ್ಲಿ ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನಿಂದ ಪ್ರತಿವರ್ಷ ಶುಭಕೃತ್‌ ನಾಮ ಸಂವತ್ಸರ ಚಾಂದ್ರಮಾನ/ಸೌರಮಾನ ಯುಗಾದಿಯ ದಿನಗಳಂದು ನಮ್ಮ ಇಲಾಖಾ ವ್ಯಾಪ್ತಿಯ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಧಾರ್ಮಿಕ ದಿನಾಚರಣೆಯನ್ನು ಆಚರಿಸುವಂತೆ ಸೂಚನೆ ನೀಡಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.
ಆ ದಿನದಂದು ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ಸಾರ್ವಜನಿಕ ಭಕ್ತಾದಿಗಳ ಗಮನವನ್ನು ಸೆಳೆಯುವ ನಿಟ್ಟಿನಲ್ಲಿ ವಿಶೇಷ ಪಂಚಾಂಗ ಶ್ರವಣ ಮಾಡಿಸುವ ಮೂಲಕ ಸಾರ್ವಜನಿಕ ಭಕ್ತರಿಗೆ ಹೊಸ ಸಂವತ್ಸರದ ಶುಭಾಶುಭ ಫಲಗಳು, ಆದಾಯ ವ್ಯಯಗಳೂ, ನಕ್ಷತ್ರಗಳ ಫಲಗಳು ಮುಂತಾದವುಗಳನ್ನು ತಿಳಿದುಕೊಳ್ಳಲು ಅನುಕೂಲವಾಗುವಂತೆ ಕಾರ್ಯಕ್ರಮವನ್ನು ಆಯೋಜಿಸಬೇಕು. ಅಲ್ಲದೆ, ಚಾಂದ್ರಮಾನ ಯುಗಾದಿ ದಿನದಂದು, ಜೀವನದಲ್ಲಿ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂಬ ಸಮಚಿತ್ತ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂಬ ತತ್ವವನ್ನು ಹೊಂದಿದ್ದು, ರೂಢಿಯಲ್ಲಿರುವಂತೆ ದೇವಾಲಯಗಳಲ್ಲಿ ಬೇವು ಮತ್ತು ಬೆಲ್ಲಗಳನ್ನು ವಿತರಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಸುತ್ತೋಲೆಯನ್ನು ಹೊರಡಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಸಚಿವರು ಸೂಚಿಸಿದ್ದಾರೆ.

ರಾಜ್ಯ ಧಾರ್ಮಿಕ ದಿನಾಚರಣೆಯ ಮಾರ್ಗಸೂಚಿಗಳು:

1. ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಲ್ಲಿ ಯುಗಾದಿಯನ್ನು “ಧಾರ್ಮಿಕ ದಿನವನ್ನಾಗಿ” ಆಚರಿಸುವುದು.

2. ರಾಜ್ಯದ ಅಭಿವೃದ್ಧಿಗಾಗಿ ಇದೇ ಸಂಧರ್ಭದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆಗಳನ್ನು ರಾಜ್ಯದ ದೇವಾಲಯಗಳಲ್ಲಿ ಕೈಗೊಳ್ಳುವುದು.

3. ದೇವಾಲಯಗಳಲ್ಲಿ ಸಕ್ರಿಯವಾಗಿರುವ ಸ್ವಯಂ ಸೇವಾ ತಂಡಗಳಿಂದ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಲಭ್ಯತೆಗೆ ಅನುಸಾರವಾಗಿ ಆಯೋಜಿಸುವುದು.

4. ಪ್ರತಿ ದೇವಾಲಗಳಲ್ಲಿ ಹೆಚ್ಚಿನ ಭಕ್ತರು ಪಾಲ್ಗೊಳ್ಳುವಂತೆ ಆಡಳಿತ ಮಂಡಳಿಯು ಈ ಸಂದರ್ಭವನ್ನು ಬಳಸಿ ಕಾರ್ಯಕ್ರಮಗಳನ್ನು ರೂಪಿಸುವುದು.

5. ಧಾರ್ಮಿಕ ದಿನಾಚರಣೆಯನ್ನು ಪ್ರತಿ ದೇವಾಲಯಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ತಿಳಿಯಪಡಿಸುವ ರೀತಿಯಲ್ಲಿ ಕ್ರಿಯಾತ್ಮಕವಾಗಿ ಆಚರಿಸಬೇಕು.

6. ರಾಜ್ಯದ ಶಿಷ್ಟಾಚಾರ ಪಾಲಿಸಿಕೊಂಡು ಕಾರ್ಯಕ್ರಮಗಳನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ವಿಶಿಷ್ಟ ರೀತಿಯಲ್ಲಿ ಆಯೋಜಿಸಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!