ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಧುನಿಕ ಯುಗದಲ್ಲಿ ತಂತ್ರಜ್ಞಾನ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ಜನರು ಕೂಡ ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಈಗಿನ ಯುಗದಲ್ಲಿ ಯಾರ ಕೈಲಿ ನೋಡಿದರೂ ಜಂಗಮವಾಣಿಯ ಜಾತ್ರೆ ಮಾಮೂಲಾಗಿದೆ. ಅವುಗಳಿಗೆ ಬೇಕಿರುವ ನೆಟ್ವರ್ಕ್ಗಾಗಿ ಎಲ್ಲಿ ನೋಡದ್ರೂ ಮೊಬೈಲ್ ಟವರ್ಗಳ ಹಾವಳಿಯೂ ಅಷ್ಟೇ ಜೋರಾಗಿದೆ. ಈ ಸೆಲ್ ಫೋನ್ ಟವರ್ಗಳಿಂದ ಅಪಾಯಕಾರಿ ವಿಕಿರಣ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ಎಷ್ಟು ದುಷ್ಪರಿಣಾಮ ಬೀರುತ್ತಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇವುಗಳಿಂದ ಪಕ್ಷಿ ಸಂಕುಲ ಹೇಳ ಹೆಸರಿಲ್ಲದಂತೆ ಹೋಗುವುದಕ್ಕೆ ಸಮಯ ಅಷ್ಟು ದೂರವೇನೂ ಇಲ್ಲ. ಈ ನಡುವ ನಡೆದ ಘಟನೆಯೊಂದು ಎಲ್ಲರನ್ನೂ ಆಶ್ಚರ್ಯವಾಗುವಂತೆ ಮಾಡಿದೆ.
ಛತ್ತೀಸ್ಗಢ ರಾಜ್ಯದ ಗರಿಯಾಬಂದ್ ಜಿಲ್ಲೆಯ ಲಚ್ಕೇರಾ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಸೆಲ್ ಫೋನ್ ಟವರ್ ನಿರ್ಮಾಣಕ್ಕೆ ತಡೆ ಒಡ್ಡಿದ್ದಾರೆ. ನಮಗೆ ನೆಟ್ವರ್ಕ್ ಇಲ್ಲ ಅಂದ್ರೂ ಪರವಾಗಿಲ್ಲ, ಟವರ್ ಬೇಡ ಎಂದು ಖಡಾಖಂಡಿತವಾಗಿ ಉತ್ತರಿಸಿದ್ದಾರೆ. ಅವರ ಈ ನಿರ್ಧಾರದ ಹಿಂದೆ ಯಾವುದೇ ಸ್ವಾರ್ಥ ಇಲ್ಲ.. ತಮ್ಮ ಆರೋಗ್ಯ ಕಾಪಾಡುವ ಹಂಬಲವೂ ಇಲ್ಲ..ಬದಲಿಗೆ ಲಚ್ಚೇರಾ ಗ್ರಾಮಕ್ಕೆ ವಲಸೆ ಬರುವ ಪಕ್ಷಿಗಳ ಬಗ್ಗೆ ಮಾತ್ರ ಯೋಚಿಸುತ್ತಿದ್ದರು.
ಪ್ರತಿ ವರ್ಷ ಮಳೆಗಾಲದಲ್ಲಿ, ಚೀನಾ, ಥೈಲ್ಯಾಂಡ್, ಬರ್ಮಾ ಮತ್ತು ಇಂಡೋನೇಷ್ಯಾದಿಂದ ನೂರಾರು ಏಷ್ಯನ್ ಓಪನ್ ಬಿಲ್ ಜಾತಿಯ ಕೊಕ್ಕರೆಗಳು ಈ ಹಳ್ಳಿಗೆ ವಲಸೆ ಬರುತ್ತವೆ. ಈ ಕೊಕ್ಕರೆಗಳು ಲಚ್ಕೇರಾ ಗ್ರಾಮದ ಮರಗಳ ಮೇಲೆ ಗೂಡು ಕಟ್ಟಿಕೊಂಡು ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಈ ಪ್ರಕ್ರಿಯೆಯಲ್ಲಿ, ಅವರು ತಮ್ಮ ಗ್ರಾಮದ ಕೆರೆಯಲ್ಲಿ ನೀರು ಹಾವು, ಕಪ್ಪೆ ಮತ್ತು ಕೀಟಗಳನ್ನು ತಿನ್ನುತ್ತವೆ. ಇಲ್ಲೇ ಸಂತಾನಾಭಿವೃದ್ಧಿ ಮಾಡಿ ದೀಪಾವಳಿ ಹಬ್ಬದ ಸಮಯ ಮುಗಿದು ಮಕ್ಕಳೊಂದಿಗೆ ತೆರಳುತ್ತಾರೆ ಎನ್ನುತ್ತಾರೆ ಗ್ರಾಮಸ್ಥರು.
ನಮ್ಮ ಗ್ರಾಮದಲ್ಲಿ ಸೆಲ್ ಟವರ್ ಗಳನ್ನು ಅಳವಡಿಸಿದರೆ ಈ ಪಕ್ಷಿಗಳ ಸಂತಾನಾಭಿವೃದ್ಧಿಗೆ ಧಕ್ಕೆಯಾಗಲಿದೆ ಎಂಬುದು ಲಚ್ಕೇರಾ ಗ್ರಾಮಸ್ಥರ ಆತಂಕ. ಈ ಕಾರಣಗಳಿಂದ ತಮ್ಮ ಗ್ರಾಮದಲ್ಲಿ ಸೆಲ್ ಫೋನ್ ಟವರ್ ಗಳನ್ನು ಸ್ಥಾಪಿಸದಂತೆ ಎಚ್ಚರಿಕೆ ನೀಡಲಾಗಿದೆ. ಲಚ್ಕೇರಾ ಗ್ರಾಮದ ಸರಪಂಚ್ ಮಾಧ್ಯಮ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. ಗ್ರಾಮದಲ್ಲಿರುವ ವಲಸೆ ಹಕ್ಕಿಗಳಿಗೆ ಯಾರಾದರೂ ತೊಂದರೆ ನೀಡಿದರೆ 1000 ರೂ.ದಂಡ ವಿಧಿಸಲಾಗುವುದು ಎಂದರು.