ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಣರಾಜ್ಯೋತ್ಸವದ ಟ್ಯಾಬ್ಲೋ ವಿಚಾರವಾಗಿ ಕೇಂದ್ರ ಬೇಕಂತಲೇ ರಾಜ್ಯಕ್ಕೆ ಅವಕಾಶ ನೀಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಕಳೆದ 14 ವರ್ಷಗಳಿಂದ ಕರ್ನಾಟಕಕ್ಕೆ ಅವಕಾಶ ಸಿಕ್ಕಿದೆ ಅನ್ನೋದನ್ನು ರಾಜ್ಯ ಸರ್ಕಾರ ಮರೆತಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಕಳೆದ 14 ವರ್ಷದಿಂದ ನಮಗೆ ಅವಕಾಶ ಸಿಕ್ಕಿದೆ, ಕಳೆದ ವರ್ಷ ಸಿಕ್ಕಿರಲಿಲ್ಲ ಆದರೆ ಕೇಂದ್ರಕ್ಕೆ ಮನವಿ ಮಾಡಿದ ನಂತರ ಅವಕಾಶ ಸಿಕ್ಕಿತ್ತು. ನಮ್ಮ ರಾಜ್ಯಕ್ಕೆ ಅವಕಾಶ ಕೊಡಬಾರದು ಅನ್ನೋದು ಕೇಂದ್ರದ ಉದ್ದೇಶ ಅಲ್ಲ, ಬೇರೆ ಬೇರೆ ರಾಜ್ಯಗಳಿಗೂ ಅವಕಾಶ ಸಿಗಲಿ ಅನ್ನೋದು ಉದ್ದೇಶವಾಗಿದೆ. ಅವಕಾಶ ಸಿಗದ ಎಲ್ಲ ರಾಜ್ಯಗಳಿಗೂ ಸ್ಟಾಲ್ ಹಾಕಲು ಅವಕಾಶ ನೀಡಿದ್ದಾರೆ. ಮುಂದಿನ ಬಾರಿ ಚಾನ್ಸ್ ನೀಡುವುದಾಗಿ ಕೇಂದ್ರ ಹೇಳಿದೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ನಿಜವಾಗಿಯೂ ಕನ್ನಡಿಗರ ಬಗ್ಗೆ ಕಾಳಜಿ ಇದ್ರೆ ಮೊದಲು ಮೂಲಭೂತ ಸಮಸ್ಯೆಗಳ ಬಗ್ಗೆ ಗಮನ ಕೊಡಲಿ. ಕಾವೇರಿ ಸಮಸ್ಯೆ ಇದೆ, ಅದರ ಬಗ್ಗೆ ಮಾತನಾಡ್ತಿದ್ದಾರಾ? ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿ ಬಗ್ಗೆ ಹೇಳಿಕೆ ನೀಡಿದ್ದರ ಬಗ್ಗೆ ಏನಾದ್ರೂ ಚರ್ಚೆ ಆಗಿದ್ಯಾ? ಬರೀ ಮೊಸಳೆ ಕಣ್ಣೀರು ಯಾರಿಗೂ ಬೇಕಿಲ್ಲ. ಜನಕ್ಕೆ ಬೇಕಿರೋದು ಅಭಿವೃದ್ಧಿ ಕೆಲಸ.
ಕರವೇ ನಾರಾಯಣಗೌಡರ ಕಥೆಯನ್ನೇ ನೋಡಿ ಜಾಮೀನಿನ ಮೇಲೆ ಹೊರಬಂದ ಕ್ಷಣವೇ ಮತ್ಯಾವುದೋ ಹಳೇ ಕೇಸ್ ಹೆಸರಲ್ಲಿ ಅರೆಸ್ಟ್ ಮಾಡಿದ್ದಾರೆ. ಎಲ್ಲವನ್ನೂ ಜನ ಸೂಕ್ಷ್ಮವಾಗಿ ಗಮನಿಸ್ತಿದ್ದಾರೆ ಎಂದು ಹೇಳಿದ್ದಾರೆ.