ಹೊಸದಿಗಂತ ವರದಿ ಹುಬ್ಬಳ್ಳಿ:
ಮಣಿಪುರದಲ್ಲಿ ನುಸುಳುಕೋರರ ಪ್ರಚೋದನೆಯಿಂದ ಜಾತಿ, ಧರ್ಮಗಳ ನಡುವೆ ಸಂಘರ್ಷಗಳು ಉಂಟಾಗುತ್ತಿದ್ದು, ಅವರನ್ನು ಕೇಂದ್ರ ಸರ್ಕಾರ ಸದೆ ಬಡಿಯಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದ ತಪ್ಪುಗಳ ಕಾರಣದಿಂದ ಬೇರೆ ದೇಶದ ನುಸುಳುಕೋರರು ದೇಶದ ಈಶ್ಯಾನ್ಯ ಭಾಗದಲ್ಲಿ ಬಂದು ಸೇರಿದ್ದಾರೆ. ಇವರ ವಿದ್ರೋಹಿ ಚಟುವಟಿಕೆಗಳಿಂದ ಅಮಾನವೀಯ ಕೃತ್ಯಗಳು ನಡೆಯುತ್ತಿವೆ.
ಒಂದು ಕಾಲದಲ್ಲಿ ಈಶ್ಯಾನ್ಯ ರಾಜ್ಯಗಳು ನಾವು ಭಾರತೀಯ ಎಂದು ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಆಗಿನ ಸರ್ಕಾರ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿತ್ತು. ಮೋದಿಯವರು ಪ್ರಧಾನಿ ಆದ ಬಳಿಕ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಈಗ ಆ ರಾಜ್ಯಗಳಿಗೂ ಸರ್ಕಾರ ಸಕಲ ಸೌಲಭ್ಯ ನೀಡುತ್ತಿದೆ ಎಂದರು.
ನುಸುಳುಕೋರರು ಈಗ ವಿದ್ರೋಹಿ ಚಟುವಟಿಕೆ ನಡೆಸಿ, ದೇಶದ ಶಾಂತಿ ಹಾಳು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಅವರನ್ನು ಸುಮ್ಮನೆ ಬಿಡಲ್ಲ. ಈಶ್ಯಾನ್ಯ ರಾಜ್ಯಗಳಲ್ಲಿ ಮತ್ತೆ ಶಾಂತಿ ನೆಲೆಸುವಂತೆ ಮಾಡುತ್ತದೆ. ವಿರೋಧ ಪಕ್ಷಗಳು ಸಾವಿನ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ಪಾರ್ಲಿಮೆಂಟ್ ನಲ್ಲಿ ಚರ್ಚೆ ಮಾಡೋದು ಬಿಟ್ಟು ಬೀದಿಗೆ ಇಳಿದಿದ್ದಾರೆ. ಆದರೆ ಭಾರತ ಸರ್ಕಾರ ದೇಶದ ರಕ್ಷಣೆಗೆ ಹಾಗೂ ವಿರೋಧ ಪಕ್ಷದವರಿಗೆ ಉತ್ತರಿಸಲು ಸಿದ್ಧವಿದೆ. ಕೇಂದ್ರ ಸರ್ಕಾರವನ್ನು ಕೆಟ್ಟದಾಗಿ ಬಿಂಬಿಸುವ ಕಾರ್ಯನಡೆಯುತ್ತಿರುವುದು ಸರಿಯಲ್ಲ.
ಶೀಘ್ರದಲ್ಲೇ ವಿರೋಧ ಪಕ್ಷದ ನಾಯಕನ ಆಯ್ಕೆ
ವಿರೋಧ ಪಕ್ಷದ ನಾಯಕನನ್ನು ಸದ್ಯದಲ್ಲೇ ಆಯ್ಕೆ ಮಾಡಲಾಗುತ್ತದೆ. ಚುನಾವಣಾ ಮುನ್ನ ಕಾಂಗ್ರೆಸ್ ಕೊಟ್ಟ ಭರವಸೆ ಅಧಿಕಾರಕ್ಕೆ ಬಂದರೂ ಈಡೇರಿಸಿಲ್ಲ. ಹಣಕಾಸಿನ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದೆ. 5 ಗ್ಯಾರೆಂಟಿಗಳನ್ನು ಮೊದಲ ಕ್ಯಾಬಿನೆಟ್ ನಲ್ಲಿ ಜಾರಿ ಮಾಡುತ್ತೇವೆ ಎಂದಿದ್ದರೂ ಇನ್ನೂ ಮಾಡಿಲ್ಲ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಿಮ್ಮ ಮೊದಲ ಕ್ಯಾಬಿನೆಟ್ ಯಾವಾಗ ಎಂದು ಪ್ರಶ್ನಿಸಿದರು.