ಹೊಸದಿಗಂತ ವರದಿ, ವಿಜಯಪುರ:
ವಿಕ್ರಂ ಲ್ಯಾಂಡರ್ ಚಂದ್ರನ ಅಂಗಳವನ್ನು ಯಶಸ್ವಿಯಾಗಿ ಸ್ಪರ್ಶ ಮಾಡಿದ ಹಿನ್ನೆಲೆ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಇಲ್ಲಿನ ಕಚೇರಿಯಲ್ಲಿ ಅಳವಡಿಸಿದ ಬೃಹತ್ ಎಲ್ಇಡಿ ಪರದೆ ಮೇಲೆ ಚಂದ್ರಯಾನ- 3 ನೇರ ಪ್ರಸಾರವನ್ನು ವೀಕ್ಷಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿ ಕ್ಷಣಗಳನ್ನು ಕತೂಹಲದಿಂದ ಆನಂದಿಸಿದರು. ಚಂದ್ರಯಾನ-3 ಯಶಸ್ವಿಯಾಗುತ್ತಿದ್ದಂತೆ ಭಾರತ ಮಾತಾ ಕೀ ಜೈ, ಮೇರಾ ಭಾರತ ಮಹಾನ್ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು.
ಈ ಸಂದರ್ಭ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ವಿಕ್ರಂ ಲ್ಯಾಂಡರ್ ಯಶಸ್ವಿ ಸಾಧನೆಯ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಪರಿಶ್ರಮ ಹಾಗೂ ಸಮಸ್ತ ಭಾರತೀಯರ ಪ್ರಾರ್ಥನೆ ಅಡಗಿದೆ. ಇಸ್ರೋ ವಿಜ್ಞಾನಿಗಳು ಇಡೀ ದೇಶದ ಪ್ರತಿಯೊಬ್ಬ ಪ್ರಜೆ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ, ಅವರ ಪರಿಶ್ರಮಕ್ಕೆ ಇಂದು ಯಶಸ್ಸು ದೊರಕಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿ, ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಇಳಿದಿರುವುದು ಅಭಿಮಾನ ಹಾಗೂ ಹೆಮ್ಮೆಯ ಸಂಗತಿ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಮ್ಮೆ ಸಾಧನೆಯ ಶಿಖರ ಏರುವಂತಾಗಿದೆ. ಚಂದ್ರನ ಬಗ್ಗೆ ಇನ್ನಷ್ಟೂ ಅಧ್ಯಯನ, ಸಂಶೋಧನೆಗೆ ಭಾರತದ ಈ ಯಾನ ಮುನ್ನುಡಿ ಬರೆಯಲಿದೆ, ಇದು ಅಭಿಮಾನದ ಸಂಗತಿ ಎಂದರು.
ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ, ಮುಖಂಡ ಪ್ರಕಾಶ ಅಕ್ಕಲಕೋಟ, ಮುಖಂಡ ವಿಜುಗೌಡ ಪಾಟೀಲ, ಉಮೇಶ ಕಾರಜೋಳ, ಉಮೇಶ ಕೋಳಕೂರ, ಬಸವರಾಜ ಬಿರಾದಾರ, ಮಲ್ಲಿಕಾರ್ಜುನ ಜೋಗುರ, ಪಾಲಿಕೆ ಸದಸ್ಯ ಮಳುಗೌಡ ಪಾಟೀಲ, ಭೀಮಾಶಂಕರ ಹದನೂರ, ರಾಹುಲ್ ಜಾಧವ, ವಿಠ್ಠಲ ಹೊಸಪೇಟ, ವಿವೇಕಾನಂದ ಡಬ್ಬಿ, ವಿಜಯ ಜೋಶಿ, ಸುವರ್ಣಾ ಕುರ್ಲೇ, ರಾಜೇಶ್ವರಿ, ಶಾಂತಾ ಉತ್ಲಾಸ್ಕರ, ಸುಶ್ಮಿತಾ ಹೊಂಡಕರ, ಸುಮಂಗಲಾ ಕೋಟಿ, ಕೃಷ್ಣಾ ಗುನಾಳಕರ, ರಾಜೇಶ ತವಸೆ ಇದ್ದರು.