ಹೊಸದಿಗಂತ ವರದಿ, ಮೈಸೂರು:
ವಿಪಕ್ಷ ನಾಯಕರಾದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೇಲೆ ಬಸಪ್ಪ ಆದರೆ ಒಳಗೆ ವಿಷಪ್ಪ. ತನ್ನ ಮುಖ್ಯ ಮಂತ್ರಿ ಸ್ಥಾನಕ್ಕೆ ಅಡ್ಡಿಯಾಗುತ್ತಿರುವವರನ್ನೆಲ್ಲಾ ರಾಜಕೀಯ ವಾಗಿ ಕತ್ತು ಹಿಸುಕಿ ಮುಗಿಸುತ್ತಿದ್ದಾರೆ. ಅವರಷ್ಟು ದಲಿತ ವಿರೋಧಿ ಬೇರೆ ಯಾರೂ ಇಲ್ಲ, ಸಿದ್ದರಾಮಯ್ಯ ಗೋಮುಖ ವ್ಯಾಘ್ರ ಎಂದು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ರಾದ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದರು.
ಸೋಮವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಬಾರಿ ಕಾಂಗ್ರೆಸ್ ದಲಿತರನ್ನು ಮುಖ್ಯ ಮಂತ್ರಿ ಮಾಡಬೇಕಾಗಿತ್ತು, ಆದರೆ ಸಿದ್ದರಾಮಯ್ಯ ಮುಖ್ಯ ಮಂತ್ರಿ ಆಕಾಂಕ್ಷಿಯಾಗಿದ್ದವರನ್ನೆಲ್ಲಾ ರಾಜಕೀಯ ವಾಗಿ ಮುಗಿಸಿದರು. ಕುದುರೆ ವ್ಯಾಪಾರ ಮಾಡಿ ಮುಖ್ಯ ಮಂತ್ರಿ ಯಾದರು. ಆ ಮೂಲಕ ದಲಿತರಿಗೆ ಸಿಎಂ ಸ್ಥಾನ ತಪ್ಪಿಸಿದರು. ಕುತಂತ್ರ ರಾಜಕಾರಣ ಮಾಡುತ್ತಾ ಬಂದು ಕಾಂಗ್ರೆಸ್ ನಲ್ಲಿ ತಾನೊಬ್ಬನೇ ನಾಯಕರಾಗಿ ಬೆಳೆದರು.ಹತ್ತು ಜನ ಗೆಲ್ಲಿಸಿಕೊಂಡು ಬರುವವನು ನಿಜವಾದ ನಾಯಕ. ಆದರೆ ಸಿದ್ದರಾಮಯ್ಯ ಎಲ್ಲರನ್ನೂ ತುಳಿದುಕೊಂಡು ಬರುತ್ತಿದ್ದಾರೆ.ಹಾಗಾಗಿ ಅವರು ನಿಜವಾದ ನಾಯಕರಲ್ಲ, ಚಾಮುಂಡೇಶ್ವರಿ ಯಲ್ಲಿ ಅವರ ಸ್ಥಿತಿ ಏನಾಯಿತು. ಈಗ ಬಾದಾಮಿಯಲ್ಲಿ ಏನು ಪರಿಸ್ಥಿತಿ ಇದೆ.ಹೀಗಾಗಿ ಗೆಲ್ಲಲು ಯಾವುದೇ ಕ್ಷೇತ್ರವಿಲ್ಲದೆ, ಕ್ಷೇತ್ರದ ಹುಡುಕಾಟ ನಡೆಸುತ್ತಿದ್ದಾರೆ. ಇವರೊಬ್ಬ ಲೀಡರ್ ರಾ, ಬೊಗಳೆ ಭಾಷಣ ಮಾಡುವವರು ಲೀಡರ್ ಅಲ್ಲ ಎಂದು ಹರಿಹಾಯ್ದರು.
ಸಿದ್ದರಾಮಯ್ಯ ಚಡ್ಡಿ ಆರ್ ಎಸ್ ಎಸ್ ನ ಸಮವಸ್ತ್ರ. ಹಾಗಾಗಿ, ಅದನ್ನು ಸುಡಿ ಎಂದು ಹೇಳಿದ್ದಾರೆ. ಚಡ್ಡಿಯನ್ನು ಸುಟ್ಟು ಹಾಕಿದರು. ಆದರೆ ಚಡ್ಡಿಯನ್ನು ಕಾಂಗ್ರೆಸ್ ನವರು ಧರಿಸಿದ್ದರು. ಈ ಹಿಂದೆ ಪೋಲಿಸ್, ಸೈನಿಕ ರು ಸೇರಿದಂತೆ ಎಲ್ಲರು ಧರಿಸುತ್ತಿದ್ದರು.ಈಗಲೂ ಯುವ ಸಮೂಹ ಚಡ್ಡಿಯನ್ನು ಧರಿಸುತ್ತಿದೆ. ಮನುಷ್ಯ ರ ಮಾನವನ್ನು ಕಾಪಾಡುತ್ತಿದೆ. ಅದು ಮಾನವರ ಗೌರವ ದ ಸಂಕೇತವಾಗಿದೆ. ಅಂತಹ ಚಡ್ಡಿಯನ್ನು ಕಾಂಗ್ರೆಸ್ ನವರು ಸುಟ್ಟಿದ್ದಾರೆ. ಆ ಮೂಲಕ ಮಾನವರ ಮರ್ಯಾದೆ, ಗೌರವ ಗಳನ್ನು ಸುಟ್ಟಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಮಾನವೂ ಈಗ ಇಲ್ಲದಂತಾಗಿದೆ ಎಂದು ಕಿಡಿಕಾರಿದರು. ಕಾಂಗ್ರೆಸ್ ನಾಯಕರ ಇಂತಹ ಕೃತ್ಯಗಳೇ ಆ ಪಕ್ಷ ಈಗ ಈ ಪರಿಯ ದುಸ್ಥಿಗೆ, ಅವನತಿಗೆ ಬರಲು ಕಾರಣವಾಗಿದೆ ಎಂದರು. ಚಡ್ಡಿಯನ್ನು ತಯಾರು ಮಾಡುವವರು ನೇಕಾರರು, ಬಟ್ಟೆ ಗೆ ಬೇಕಾದ ವಸ್ತುಗಳನ್ನು ತಯಾರು ಮಾಡುವವರು ರೈತರು, ಚಡ್ಡಿಯನ್ನು ಹೊಲೆಯುವವರು, ಮಾರಾಟ ಮಾಡುವವರು ಇದ್ದಾರೆ. ಕಾಂಗ್ರೆಸ್ ಚಡ್ಡಿಯನ್ನು ಸುಡುವ ಮೂಲಕ ಅವರಿಗೆಲ್ಲ ಅವಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ