ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾ ವ್ಯವಸ್ಥಿತವಾಗಿ ಬೌದ್ಧ ಧರ್ಮವನ್ನು ನಾಶಮಾಡಲು ಪ್ರಯತ್ನಿಸುತ್ತಿದೆ ಆದರೆ ಬುದ್ಧನ ಮೇಲಿನ ಜನರ ನಂಬಿಕೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ದಲೈ ಲಾಮಾ ಶನಿವಾರ ಹೇಳಿದ್ದಾರೆ. ಬೋಧಗಯಾದಲ್ಲಿ ಮೂರುದಿನಗಳ ಕಾಲ ನಡೆದ ಬೌದ್ಧಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಮುಕ್ತಾಯದ ದಿನದಂದು ಮಾತನಾಡುವ ವೇಳೆ ಚೀನಾ ಬೌದ್ಧ ಧರ್ಮದವನ್ನು ಹಾಳುಗೆಡವಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ಚೀನಾವು ಪದ್ಮಸಂಭವ ಮೂರ್ತಿಯನ್ನು ಕೆಡವಿತ್ತು. ಇದು ಡಿಸೆಂಬರ್ 2021 ರಿಂದ ನಡೆದ ಮೂರನೇ ವಿಧ್ವಸಂಕ ಕೃತ್ಯ ಎನ್ನಲಾಗಿದ್ದು “ಬೌದ್ಧ ಧರ್ಮವನ್ನು ನಾಶಮಾಡುವ ಪ್ರಯತ್ನದಲ್ಲಿ, ಚೀನಾದಲ್ಲಿ ನಿರ್ಮಿಸಲಾದ ಮಠವನ್ನು ಕೆಡವಲಾಯಿತು. ನಮ್ಮ ಜನರ ನಂಬಿಕೆಯನ್ನು ನಾಶಮಾಡಲಾಯಿತು. ಚೀನಾ ಬೌದ್ಧಧರ್ಮಕ್ಕೆ ಹಾನಿ ಮಾಡಲು ಸಾಧ್ಯವಿರುವ ಎಲ್ಲವನ್ನೂ ಮಾಡಿದೆ” ಎಂದು ದಲೈ ಲಾಮಾ ಗಂಭೀರವಾಗಿ ಆರೋಪಿಸಿದ್ದಾರೆ.
“ಇಷ್ಟೆಲ್ಲಾ ಆದರೂ ಬೌದ್ಧ ಧರ್ಮ ತನ್ನ ಸ್ಥಾನದಲ್ಲಿ ಸ್ಥಿರವಾಗಿ ನಿಂತಿದೆ. ಚೀನಾದಲ್ಲಿ ಈಗಲೂ ಬೌದ್ಧ ಧರ್ಮದಲ್ಲಿ ನಂಬಿಕೆ ಇರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇನ್ನೊಬ್ಬರಿಗೆ ಹಾನಿ ಮಾಡುವುದರಿಂದ ಧರ್ಮವನ್ನು ನಾಶಮಾಡಲಾಗದು. ಇಂದಿಗೂ ಚೀನಾದಲ್ಲಿ ಬೌದ್ಧ ಧರ್ಮದ ಅನುಯಾಯಿಗಳು ಭಗವಾನ್ ಬುದ್ಧನ ಕುರಿತು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ” ಎಂದವರು ಹೇಳಿದ್ದಾರೆ. ಇದೇವೇಳೆ ಬೊಧಗಯಾದ ಪ್ರಾಮುಖ್ಯತೆಯನ್ನೂ ಅವರು ವಿವರಿಸಿದ್ದು ಕಾರ್ಯಕ್ರಮದ ಮುಕ್ತಾಯದ ವೇಳೆ ದಲೈಲಾಮಾ ಅವರು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 30 ಲಕ್ಷ ಮತ್ತು ಬಿಹಾರ ಸಿಎಂ ಪರಿಹಾರ ನಿಧಿಗೆ 20 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ.
ಇತ್ತೀಚೆಗಷ್ಟೇ, ದಲೈಲಾಮಾ ಮೇಲೆ ಬೇಹುಗಾರಿಕೆ ಮಾಡಲು ಚೀನಿ ಮಹಿಳೆಯೊಬ್ಬಳು ಬಂದಿರುವುದಾಗಿ ಗುಪ್ತಚರ ಇಲಾಖೆಗೆ ಮಾಹಿತಿ ದೊರಕಿತ್ತು. ತೀವ್ರ ಶೋಧದ ನಂತರ ಆಕೆಯನ್ನು ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.