ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಸಿನಿಮಾಗಳ ಶೀರ್ಷಿಕೆಗಳೇ ವಿವಾದಕ್ಕೆ ಕಾರಣವಾಗುತ್ತಿರುವ ಹಿನ್ನೆಲೆ, ಇದೀಗ ತಿಕ್ಲು ರಾಮ ಚಿತ್ರದ ಟೈಟಲ್ ಸುತ್ತ ಚರ್ಚೆ ಶುರುವಾಗಿದೆ. ಶೂಟಿಂಗ್ ಪ್ರಗತಿಯಲ್ಲಿರುವ ಈ ಚಿತ್ರಕ್ಕೆ ಟೈಟಲ್ ಬದಲಾವಣೆ ಮಾಡುವಂತೆ ಒತ್ತಾಯ ಕೇಳಿಬಂದಿದೆ.
ಸಾಹಿತಿ ಹಾಗೂ ಸಂಗೀತಗಾರ ಮಂಜುಕವಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಡಾ. ರಾಜ್ವೀರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಮನವಮಿ ಸಂದರ್ಭದಲ್ಲಿ ಬಿಡುಗಡೆಯಾದ ಪೋಸ್ಟರ್ ನಂತರ, ಶೀರ್ಷಿಕೆ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿ ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಲಾಗಿದೆ.
ಇದನ್ನೂ ಓದಿ:
ಈ ಕುರಿತು ಪ್ರತಿಕ್ರಿಯಿಸಿದ ಚಿತ್ರತಂಡ, ರಾಮ ಹಾಗೂ ಹನುಮನ ಹೆಸರಿಗೆ ಯಾವುದೇ ರೀತಿಯ ಅವಮಾನ ಮಾಡುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದೆ. ಶೀರ್ಷಿಕೆ ಬಗ್ಗೆ ಆಕ್ಷೇಪ ಇದ್ದಲ್ಲಿ ಪರಿಗಣಿಸಿ ತಿದ್ದುಪಡಿ ಮಾಡಲಾಗುವುದು ಎಂದು ನಿರ್ಮಾಪಕಿ ಶ್ರುತಿ ಜಿ.ಬಿ. ಮತ್ತು ನಿರ್ದೇಶಕ ಮಂಜುಕವಿ ತಿಳಿಸಿದ್ದಾರೆ. ಅಗತ್ಯವಿದ್ದರೆ ದೃಶ್ಯಗಳನ್ನೂ ಪರಿಷ್ಕರಿಸುವುದಾಗಿ ತಿಳಿಸಿದ್ದಾರೆ.
ಚಿತ್ರವು ಪರಿಸರ ಕಾಳಜಿಯ ಕಥಾಹಂದರ ಹೊಂದಿದ್ದು, ಸಮಾಜಮುಖಿ ಸಂದೇಶ ನೀಡುವ ಪ್ರಯತ್ನ ಮಾಡಲಾಗಿದೆ. ಕಥೆಯನ್ನು ಹಿರಿಯ ಸಾಹಿತ್ಯಿಕ ದೊಡ್ಡರಂಗೇ ಗೌಡ ಮೆಚ್ಚಿಕೊಂಡಿದ್ದಾರೆ ಎಂದು ತಂಡ ಹೇಳಿದೆ. ಶೀರ್ಷಿಕೆ ಬದಲಾವಣೆ ಕುರಿತು ಶೀಘ್ರದಲ್ಲೇ ಅಧಿಕೃತ ಮಾಹಿತಿ ನೀಡುವ ಸಾಧ್ಯತೆ ಇದೆ.



