ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯಾಗುವುದಾಗಿ ನಂಬಿಸಿ ಅಪರಿಚಿತ ವ್ಯಕ್ತಿಯೊಬ್ಬ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್ಎಫ್) ಸೇರಿದ ಮಹಿಳಾ ಕಾನ್ಸ್ಟೆಬಲ್ಗೆ 18 ಲಕ್ಷ ರೂಪಾಯಿ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ಮಹಿಳೆ ಮದುವೆಯಾಗಲು ಸಂಗಾತಿಗಾಗಿ ಹುಡುಕುತ್ತಿರುವಾಗ ಕನ್ನಡ ಮ್ಯಾಟ್ರಿಮೋನಿ ಸೈಟ್ ಮೂಲಕ ಆರೋಪಿ ಅಶೋಕ್ ಮಾಸ್ತಿ ಎಂಬಾತನೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ.
ತಾನು ಸರ್ಕಾರಿ ನೌಕರಿಗಾಗಿ ತಯಾರಿ ನಡೆಸುತ್ತಿದ್ದು, ಶೀಘ್ರದಲ್ಲೇ ಸಿಗಲಿದೆ ಎಂದು ಮಾಸ್ತಿ ಸಂತ್ರಸ್ತೆಗೆ ತಿಳಿಸಿದ್ದಾನೆ. ಬಳಿಕ ಆರೋಪಿ ಆಕೆಯ ನಿವಾಸಕ್ಕೂ ಭೇಟಿ ನೀಡಲು ಆರಂಭಿಸಿದ್ದಾನೆ.
ಆಕೆಯನ್ನು ಮದುವೆಯಾಗಲು ವರದಕ್ಷಿಣೆಯಾಗಿ 20 ಲಕ್ಷ ರೂ. ನೀಡುವಂತೆ ಮಾಸ್ತಿ ಬೇಡಿಕೆಯಿಟ್ಟಿದ್ದಾನೆ. ಸಂತ್ರಸ್ತೆ ಹಣವನ್ನು ಆತನಿಗೆ ವರ್ಗಾಯಿಸಿದ್ದಾರೆ. ಆದರೆ, ಹಣ ಪಡೆದ ಬಳಿಕ ಒಂದಲ್ಲ ಒಂದು ಕಾರಣ ನೀಡಿ ಆರೋಪಿ ಮದುವೆಯನ್ನು ಮುಂದೂಡುತ್ತಾ ಬಂದಿದ್ದಾನೆ.
ಈ ಬಗ್ಗೆ ಸಂತ್ರಸ್ತೆ ಆತನನ್ನು ಪ್ರಶ್ನಿಸಿದಾಗ, ಆಕೆಯನ್ನು ಮದುವೆಯಾಗಲು ಮಾಸ್ತಿ ನಿರಾಕರಿಸಿದ್ದಾನೆ ಮತ್ತು ಆಕೆಯ ಕರೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಿದ್ದಾನೆ. ಸಂತ್ರಸ್ತೆಯ ಜೊತೆ ಸಂಪರ್ಕದಲ್ಲಿದ್ದ ಆರೋಪಿಯ ಸಂಬಂಧಿಕರು ಕೂಡ ಮಾತು ನಿಲ್ಲಿಸಿದ್ದಾರೆ.
ಇದರಿಂದ ನಿರಾಸೆಗೊಂಡ ಸಂತ್ರಸ್ತೆ ಆರೋಪಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ದಾಬಸ್ಪೇಟೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.