ಹೊಸದಿಗಂತ ವರದಿ, ಮೈಸೂರು:
ಒಂದು ವಾರದೊಳಗೆ ಎಲ್ಲಾ ಆಂಗ್ಲಭಾಷೆಯ ನಾಮಫಲಕಗಳನ್ನು ತೆರವುಗೊಳಿಸಿ ಕನ್ನಡ ನಾಮಫಲಕಗಳನ್ನು ತರಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದರು.
ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಕನ್ನಡ ಅನುಷ್ಟಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಸೂರು ನಗರದಲ್ಲಿ ರಾರಾಜಿಸುತ್ತಿರುವ ಆಂಗ್ಲ ಫಲಕಗಳನ್ನು ತೆರವು ಮಾಡುವಂತೆ ಪ್ರಾಧಿಕಾರಕ್ಕೆ ಹೆಚ್ಚಿನ ದೂರುಗಳು ಬಂದಿದೆ. ಈ ಹಿನ್ನೆಲೆ ವಾರದೊಳಗೆ ಎಲ್ಲಾ ಆಂಗ್ಲ ಭಾಷೆಯ ನಾಮಫಲಕಗಳನ್ನು ತೆರವು ಮಾಡುವಂತೆ ಸೂಚಿಸಿದರು.
ಈಗಾಗಲೇ ಜಿಲ್ಲಾ ಜಾಗೃತಿ ಸಮಿತಿ 174 ಆಂಗ್ಲಭಾಷೆಯಲ್ಲಿರುವ ನಾಮಫಲಕಗಳನ್ನು ತೆರವುಗೊಳಿಸುವಂತೆ ವರದಿ ನೀಡಿದೆ. ಆದರೆ ಅಧಿಕಾರಿಗಳು ಈವರೆಗೂ ಯಾಕೇ ಕ್ರಮ ಕೈಗೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿದ್ದರೆ ತೊಂದರೆ ಇಲ್ಲ. ಏಕ ಭಾಷೆಯಲ್ಲಿರುವ ನಾಮಫಲಕಗಳನ್ನು ತೆರವು ಮಾಡಲೇಬೇಕು. ಮೈಸೂರಿನಲ್ಲಿ ಕನ್ನಡ ಭವನ ನಿರ್ಮಾಣದ ಅವಶ್ಯವಿದೆ ಎಂದು ಜಿಲಾ ಜಾಗೃತಿ ಸಮಿತಿ ಸದಸ್ಯರು ಗಮನಕ್ಕೆ ತಂದರು. ಮುಡಾದಿಂದ ನಿವೇಶನ ಪಡೆಯಲು ಚರ್ಚಿಸುವುದು, ಭವನ ನಿರ್ಮಾಣಕ್ಕೆ ಅನುದಾನಕ್ಕೆ ಪ್ರಯತ್ನಿಸುವ ಬಗ್ಗೆ ಚರ್ಚಿಸಲಾಯಿತು.
ಜನಸಾಮಾನ್ಯರಿಗೆ ಸರ್ಕಾರದ ವೆಬ್ಸ್ಯೆಟ್ ಗಳಲ್ಲಿ ಎಲ್ಲಾ ವಿಷಯ ತಿಳಿಯಬೇಕು ಎಂಬ ಕಾರಣಕ್ಕಾಗಿ ಕರ್ನಾಟಕದ ಎಲ್ಲಾ ವೆಬ್ಸೈಟ್ ಗಳು ಕನ್ನಡದಲ್ಲಿ ಒಂದೇ ಮಾದರಿಯಲ್ಲಿ ಇರಬೇಕು ಎಂದು ತಿಳಿಸಿದರು. ಇಲಾಖೆಗಳಿಂದ ನೀಡುವ ಜಾಹೀರಾತುಗಳು ಕಡ್ಡಾಯವಾಗಿ ಕನ್ನಡದಲ್ಲಿ ನೀಡಬೇಕು ಎಂದು ಹೇಳಿದರು. ಚಾಮುಂಡಿಬೆಟ್ಟದಲ್ಲಿ ಎಲ್ಲಾ ಪ್ರಚಾರ ಪದಕಗಳು ಕನ್ನಡದಲ್ಲಿಯೇ ಇದೆ ಎಂದು ಅಧಿಕಾರಿಗಳು ತಿಳಿಸಿದರು.
ಕೇಂದ್ರ ಸರ್ಕಾರದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಕನ್ನಡ ಭಾಷೆಗೆ ಯಾವುದೇ ಧಕ್ಕೆಯಾಗಲ್ಲ. ರಾಷ್ಟಿçÃಯ ನೀತಿಯಿಂದ ಕನ್ನಡದ ಬೆಳವಣಿಗೆಗೆ ಹತ್ತು ಹಲವು ಆಯಾಮಗಳು ಸಿಗಲಿದೆ. ಕನ್ನಡದ ಬೆಳವಣಿಗೆಗೆ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನ ಬಹುತೇಕ ಬಳಕೆಯಾಗುತ್ತಿದೆ. ಬಳಕೆಯಾಗದೇ ಇರುವ ಇಲಾಖೆಗಳಿಗೆ ಬಳಕೆ ಮಾಡುವಂತೆ ಸಲಹೆ ಸೂಚನೆ ನೀಡಲಾಗುತ್ತಿದೆ ಎಂದರು.
ಭವಿಷ್ಯದ ಕನ್ನಡದ ಬೆಳವಣಿಗೆಗೆ ತಂತ್ರಾoಶದ ಅಗತ್ಯತೆಯಿದೆ. ಈ ಮುಖಾಂತರವೇ ಮಕ್ಕಳಿಗೆ ಮೊಬೈಲ್ ಗಳ ಮುಖಾಂತರ ಕನ್ನಡ ಕಲಿಸುವ ಕೆಲಸ ಮಾಡಲಾಗುತ್ತದೆ. ಕನ್ನಡ ಪ್ರಾಧಿಕಾರದ ಹೊಸ ಆಪ್ ನಲ್ಲಿ 4 ಲಕ್ಷ ಪದಗಳಿವೆ. ಐವತ್ತೆಂಟು ಡಿಕ್ಷನರಿಗಳನ್ನು ಒಳಗೊಂಡಿರುವ ಆಪ್. ಇದನ್ನು ಡೌನ್ ಲೋಡ್ ಮಾಡಿಕೊಂಡು ಉಪಯೋಗಿಸಿದರೆ ಕನ್ನಡ ಆಡಳಿತಾತ್ಮಕವಾಗಿ ಬಳಕೆ ಸುಲಭ. ವ್ಯಾಪಾರಿಗಳ ಕೂಡಾ ಹೆಚ್ಚಾಗಿ ಕನ್ನಡ ಬಳಕೆ ಮಾಡಬೇಕು. ಕನ್ನಡದಲ್ಲೇ ವ್ಯವಹಾರ-ವಹಿವಾಟು ಹೆಚ್ಚಿಸಲು ಕ್ರಮ ವಹಿಸಿದ್ದೇವೆ ಎಂದು ತಿಳಿಸಿದರು. ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್, ಅಪರ ಜಿಲ್ಲಾಧಿಕಾರಿಗಳಾದ ಮಂಜುನಾಥ್ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸುದರ್ಶನ್ ಅವರು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.