ಹೊಸದಿಗಂತ ಡಿಜಿಟಲ್ ಡೆಸ್ಕ್
ಮೈಸೂರಿನ ಶಕ್ತಿಧಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಇನ್ಫೋಸಿಸ್ ಫೌಂಡೇಶನ್ ಕಟ್ಟಡದ ಲೋಕಾರ್ಪಣೆ ಹಾಗೂ ಶಕ್ತಿಧಾಮದ ವಿದ್ಯಾಶಾಲಾ ಶಂಕುಸ್ಥಾಪನೆಯನ್ನು ಸಿಎಂ ಬೊಮ್ಮಾಯಿ ನೆರವೇರಿಸಿದರು.
ಈ ವೇಳೆ ಮಾತನಾಡಿದ ಸಿಎಂ, ಶಕ್ತಿಧಾಮದ ಮಕ್ಕಳನ್ನು ಅನಾಥರೆಂದು ಕರೆಯಬಾರದು. ಇವರು ದೇವರ ಮಕ್ಕಳು. ಶಕ್ತಿಧಾಮಕ್ಕೆ ಸರ್ಕಾರ 5 ಕೋಟಿ ರೂಪಾಯಿ ನೀಡಲಿದೆ ಎಂದು ಘೋಷಿಸಿದರು.
ಜನ್ಮ ಪೂರ್ವದ ಸಂಬಂಧ ಇರುವುದು ತಾಯಿ ಜೊತೆ ಇದೆ. ಈ ಸಂಬಂಧ ಎಲ್ಲವನ್ನೂ ಕೊಟ್ಟು ಬೆಳೆಸುತ್ತದೆ. ದುರ್ದೈವ ಮತ್ತು ನೋವಿನ ಸಂಗತಿ ಅಂದರೆ ಹೆಣ್ಣಿನ ಶೋಷಣೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಯೋಗ ಕೂಡಿ ಬಂದು ಶಕ್ತಿಧಾಮ ಬೆಳೆಯುತ್ತಿದೆ. ಸರ್ಕಾರ ಮತ್ತು ಸಮಾಜ ಮಾಡುವ ಕೆಲಸವನ್ನು ಶಕ್ತಿಧಾಮ ಮಾಡುತ್ತಿದೆ ಎಂದು ಬೊಮ್ಮಾಯಿ ಹೇಳಿದರು.
ಬೊಮ್ಮಾಯಿ ಸರ್ ಕಾಮನ್ ಮ್ಯಾನ್
ಮಕ್ಕಳಲ್ಲಿ ಕೆಲವರು ಅಣ್ಣ ಅನ್ನುತ್ತಾರೆ, ಕೆಲವರು ಅಪ್ಪ ಅನ್ನುತ್ತಾರೆ. ನನ್ನ ಉಸಿರು ಇರೋವರೆಗೂ ಶಕ್ತಿಧಾಮ ಬಿಡಲ್ಲ. ಶಕ್ತಿಧಾಮದಕ್ಕೆ ಕಟ್ಟಡ ಕಟ್ಟಿಸಿಕೊಟ್ಟ ಸುಧಾಮೂರ್ತಿ ಸಹಕಾರ ದೊಡ್ಡದು. ಬೊಮ್ಮಾಯಿ ಸರ್ ಕಾಮನ್ ಮ್ಯಾನ್. ನಾನು ಯಾವತ್ತೂ ಇಂತ ಸಿಎಂ ನೋಡಲಿಲ್ಲ. ಹಾಗಂತ ನಾನು ಈ ಹಿಂದೆ ಸಿಎಂ ಆದವರು ಸರಿ ಇಲ್ಲ ಅಂತ ಹೇಳುತ್ತಿಲ್ಲ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.
ಬೊಮ್ಮಾಯಿಯವರು ತುಂಬಾ ಸಿಂಪಲ್. ನಮ್ಮ ಕುಟುಂಬದ ಮೇಲೆ ಅಪಾರ ಗೌರವ ಇಟ್ಟಿದ್ದಾರೆ. ಅಪ್ಪು ಅಂತ್ಯಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು. ಭಾವನೆಗಳನ್ನು ಡ್ರಾಮಾದ ಮೂಲಕ ತೋರಿಸಲು ಸಾಧ್ಯವಿಲ್ಲ. ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮುಂದೆಯೂ ಅವರ ಸಹಾಯ ಇರುತ್ತೆ ಎಂದು ಭಾವಿಸಿದ್ದೇನೆ ಎಂದು ಶಿವರಾಜ್ ಕುಮಾರ್ ತಿಳಿಸಿದರು.