ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಾಧನೆ ಹಾಗೂ ವ್ಯಕ್ತಿತ್ವ ಬಿಂಬಿಸುವ ಹಾಡುಗಳ ಧ್ವನಿ ಸುರುಳಿಯನ್ನು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಅವರು ಬಿಡುಗಡೆ ಮಾಡಿದರು.
ಬೆಂಗಳೂರು ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅಭಿಮಾನಿ ಬಳಗದವರುಮುಖ್ಯಮಂತ್ರಿಯಾಗಿ ಬೊಮ್ಮಾಯಿ ಮಾಡಿರುವ ಸಾಧನೆಗಳು ಹಾಗೂ ಅವರ ವ್ಯಕ್ತಿತ್ವ ಬಿಂಬಿಸುವ ಐದು ಹಾಡುಗಳನ್ನು ಹೊರ ತಂದಿದ್ದಾರೆ.
ಧ್ವನಿ ಸುರುಳಿ ಬಿಡುಗಡೆ ಮಾಡಿ ಮಾತನಾಡಿದ ತಾರಾ ಅನುರಾಧ, ಸಿಎಂ ಬೊಮ್ಮಾಯಿ ಅಭಿಮಾನಿ ಬಳಗದಿಂದ ಸಿಎಂ ಸಾಧನೆಗಳ ಕುರಿತು ಹಾಡುಗಳ ಬಿಡುಗಡೆ ಮಾಡಿದ್ದೇನೆ. ಶಿವಕುಮಾರ್ ಮೇಟಿ ಹಾಗೂ ಅವರ ಸ್ನೇಹಿತರೆಲ್ಲ ಸೇರಿ, ಮುಖ್ಯಮಂತ್ರಿಗಳ ಮೇಲಿನ ಅಭಿಮಾನದಿಂದ ಈ ಹಾಡುಗಳನ್ನು ರಚಿಸಿದ್ದಾರೆ. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಮಾಡಿರುವ ಸಾಧನೆಗಳ ಹಾಡುಗಳನ್ನು ಮಾಡಿದ್ದಾರೆ. ನಾನು ಖುಷಿಯಿಂದ ಹಾಡುಗಳನ್ನು ಬಿಡುಗಡೆ ಮಾಡಿದ್ದೇನೆ. ಹಾಡುಗಳು ಎಲ್ಲವೂ ಚೆನ್ನಾಗಿ ಬಂದಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅಭಿಮಾನಿ ಬಳಗದ ಶಿವಕುಮಾರ್ ಮೇಟಿ ಹಾಜರಿದ್ದರು.