ಆದಿಚುಂಚನಗಿರಿಯಲ್ಲಿ ವಿಜ್ಞಾನ ಮ್ಯೂಸಿಯಂ ಸ್ಥಾಪನೆಗೆ ಅನುದಾನ-ಸಿಎಂ ಭರವಸೆ

ಹೊಸದಿಗಂತ ವರದಿ ಮಂಡ್ಯ: 

ಅನ್ನ, ಆರೋಗ್ಯ ಅಕ್ಷರ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅಪರಿಮಿತ ಸೇವೆಗೈದಿರುವ ಆದಿಚುಂಚನಗಿರಿ ಶ್ರೀಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ್ ಸ್ವಾಮೀಜಿಗಳ ಹೆಬ್ಬಯಕೆಯಾಗಿರುವ ವಿಜ್ಞಾನ ಮ್ಯೂಸಿಯಂ ಸ್ಥಾಪನೆಗೆ ಅಗತ್ಯ ಅನುದಾನ ಹಾಗೂ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ವೈದ್ಯಕೀಯ ಕಾಲೇಜಿನ ಪದವಿ ಪೂರೈಸಿರುವ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ದೇಶದಲ್ಲೇ ವಿಭಿನ್ನ ರೀತಿಯಲ್ಲಿ ವಿಜ್ಞಾನದ ಸಂಗ್ರಹಾಲಯ ನಿರ್ಮಾಣ ಮಾಡಬೇಕೆಂಬ ಶ್ರೀಗಳ ಹೆಬ್ಬಯಕೆಗೆ ಸರ್ಕಾರದ ಅಗತ್ಯ ಸಹಕಾರ ಇರಲಿದೆ ಎಂದರು.

ವೈಚಾರಿಕತೆ, ನೆಮ್ಮದಿ, ವಿಜ್ಞಾನದ ಆಸಕ್ತಿ, ಶ್ರೀಮಠದಿಂದ ಬೆಳವಣಿಗೆ ಕಾಣುತ್ತಿದೆ. ಇದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಬುದ್ಧ ಪೂರ್ಣಿಮೆ ದಿನದಂದು ನೂತನ ವೈದ್ಯಕೀಯ ಪದವೀಧರರಿಗೆ ಪದವಿ ಪ್ರದಾನ ಮಾಡುತ್ತಿರುವುದು ಅರ್ಥಪೂರ್ಣ ಕಾರ್ಯ ಎಂದರು. ವಿಶ್ವದ ಅಗ್ರ ವಿಜ್ಞಾನಿ, ಶಾಂತಿ ಧೂತ ಬುದ್ದನಾಗಿದ್ದು, ಜೀವನದ ಸಂಕಷ್ಟ ದುಖಕ್ಕೆ ಆಸೆಯೇ ಮೂಲ ಕಾರಣ ಎಂಬುದನ್ನು ಅರಿತು ತನ್ನಲ್ಲಿನ ಅಧಿಕಾರ ಹಾಗೂ ಸಂಪತ್ತನ್ನು ತ್ಯಾಗ ಮಾಡಿ ಆಸೆಯನ್ನು ಮೆಟ್ಟಿ ನಿಲ್ಲಲು ತ್ಯಾಗದ ಸಾಧನೆ ಮಾಡಿ ಜ್ಞಾನ ಪಡೆದು ಜಗತ್ಗಿಗೆ ಹಂಚಿದ ಬುದ್ಧ ನಮ್ಮೆಲ್ಲರಿಗೂ ಮಾದರಿಯಾಗಿದ್ದು, ಆತನ ತತ್ವ ಆದರ್ಶಗಳ ಆಚರಣೆಗೆ ನಾವೆಲ್ಲರೂ ಮುಂದಾಗಬೇಕೆಅದರು.
ಜಗತ್ತಿನಲ್ಲಿ ಜನಿಸಿದ ಪ್ರತಿ ವ್ಯಕ್ತಿಯೂ ಶಕ್ತಿವಂತನಾಗಿರುತ್ತಾನೆ. ಆದರೆ, ಸಾಧಕರು, ಸಾಮಾನ್ಯ ಮನುಷ್ಯರಿಗಿಂತ ವಿಭಿನ್ನ ಶಕ್ತಿ ಪಡೆದಿರುತ್ತಾರೆ. ಅವರ ಮುಗ್ದತೆಯ ನಡವಳಿಕೆ ಜೀವನದ ಯಶಸ್ಸಿಗೆ ಸೋಪಾನವಾಗಲಿದ್ದು, ಸಾಧಕರ ಹೆಜ್ಜೆಗುರುತುಗಳನ್ನು ಅರಿತು ಭಾಳ್ಮೆ ನಡೆಸಬೇಕೆಂದು ಕಿವಿಮಾತು ಹೇಳಿದರು.

ಪ್ರತಿಯೊಬ್ಬರೂ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಬೇಕು. ಭೌತಿಕ ನಡವಳಿಕೆಗೆ ಹೆದರದೆ ಶೇ.100 ರಷ್ಟು ಆತ್ಮಸಾಕ್ಷಿಯಾಗಿ ನಡೆದುಕೊಂಡರೆ ಯಶಸ್ಸು ಗಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ವೈದ್ಯಕೀಯ ಕ್ಷೇತ್ರದ ಸವಾಲುಗಳನ್ನು ಮೆಟ್ಟಿನಿಲ್ಲಲು ಯುವ ವೈದ್ಯರು ತಮ್ಮ ಜ್ಞಾನರ್ಜನೆಯನ್ನು ಹೆಚ್ಚಿಸಿಕೊಳ್ಳಲು ಸದಾ ಕಲಿಕೆಯ ಮಾರ್ಗವನ್ನು ಅವಲಂಭಿಸಬೇಕು. ಗುರುಗಳ ಸಾನಿಧ್ಯದಲ್ಲಿರಬೇಕು. ರೋಗಿಗಳ ನೋವನ್ನು ಶಮನಗೊಳಿಸುವ ಗುಣ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಅನಾದಿ ಕಾಲದಿಂದ ಅರಮನೆ-ಗುರುಮನೆಗೆ ಸಂಪರ್ಕವಿದೆ. ಶ್ರೀಗಳು ನಮ್ಮ ಸರ್ಕಾರಕ್ಕೆ ಆಶೀರ್ವಾದ ಮಾಡಬೇಕು. ರಾಜ್ಯವನ್ನ ಸುಭೀಕ್ಷವಾಗಿಡಲು ಶ್ರೀಗಳ ಮಾರ್ಗ ದರ್ಶನ ಅತ್ಯಗತ್ಯ. ಸರ್ಕಾರದ ಮೇಲೆ ಧಾರ್ಮಿಕ ನೇತಾರರು ಹಾಗೂ ಕಟ್ಟ ಕಡೆಯ ಜನರ ಸಹಕಾರ ಬೇಕೆಂದರು. ವಿವೇಕಾನಂದರ ನುಡಿಮುತ್ತಿನಂತೆ ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಸಾಧಕ ವಿಜೃಂಭಿಸುತ್ತಾನೆ. ನಮ್ಮ ಅನುಪಸ್ಥಿತಿಯಲ್ಲಿ ನಮ್ಮನ್ನು ಸ್ಮರಿಸಿಕೊಳ್ಳುವ ಒಳ್ಳೆಯ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದು ಕಿವಿಮಾತು ಹೇಳಿದರು.
ನಿಮ್ಮ ಆಲೋಚನೆ ಹಾಗೂ ಗುಣಾತ್ಮಕ ಚಿಂತನೆ ನಿಮ್ಮ ಏಳ್ಗೆಗೆ ಸಹಕಾರಿಯಾಗಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!