ಹೊಸದಿಗಂತ ಡಿಜಿಟಲ್ ಡೆಸ್ಕ್
ಜೆಡಿಎಸ್ ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಸಿ ಎಂ ಇಬ್ರಾಹಿಂ ಇಂದು ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಪಕ್ಷದ ಧ್ವಜವನ್ನು ಸಿ.ಎಂ. ಇಬ್ರಾಹಿಂ ಅವರಿಗೆ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಸಿ.ಎಂ.ಇಬ್ರಾಹಿಂ ಮಾತನಾಡಿ, ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಕಾಂಗ್ರೆಸ್ ತಪ್ಪು ಮಾಡಿದ ಕಾರಣ ಅಂದು ದೇವೇಗೌಡರು ಪಿಎಂ ಆದ್ರು. 2023ರಲ್ಲಿ ಅದೇ ತಪ್ಪು ಮಾಡುತ್ತಿದ್ದು, ಈಗ ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಜೆಡಿಎಸ್ ಸಂಸದೀಯ ಮಂಡಳಿ ಅಧ್ಯಕ್ಷರಾಗಿ ಹೆಚ್.ಕೆ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದರು. ಬಳಿಕ ಮಾತನಾಡಿ, ನಾನಾಗಿಯೇ ಪಕ್ಷದಲ್ಲಿ ಏನನ್ನೂ ಕೇಳಿಲ್ಲ. ಪಕ್ಷ ಎಲ್ಲವನ್ನೂ ಕೊಟ್ಟಿದೆ. ನನ್ನನ್ನು ಗುರುತಿಸಿ ಈ ಮಟ್ಟಕ್ಕೆ ಬೆಳೆಸಿದೆ ಎಂದು ಭಾವುಕರಾದರು.
ನಮ್ಮ ಪಕ್ಷದಲ್ಲಿ ನೂತನ ಪರ್ವ ಆರಂಭ. ಪ್ರಜಾಪ್ರಭುತ್ವದಲ್ಲಿ ಬದಲಾವಣೆ ಸರ್ವೇ ಸಾಮಾನ್ಯ. ಯಾರಿಗೆ ಕೃತಜ್ಞತೆ ಇದೆಯೋ ಅವರು ಭಾವುಕರಾಗುತ್ತಾರೆ. ನಾನು ಕುಮಾರಣ್ಣ ಭಾವನಾ ಜೀವಿಗಳು. ಮಾಧ್ಯಮಗಳು ಇದನ್ನ ತಪ್ಪಾಗಿ ಅರ್ಥೈಸಬಾರದು ಎಂದು ಭಾವುಕರಾಗಿ ಮಾತನಾಡಿದರು.