ಹೊಸದಿಗಂತ ವರದಿ, ವಿಜಯಪುರ:
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಉಚ್ಚಾಟನೆ ಬಳಿಕ ಬಿಜೆಪಿ ಪಕ್ಷಕ್ಕೆ ಲಾಭ ಆಗಿದೆ ಎಂದು ನಾನೇನು ಹೇಳತಾಯಿಲ್ಲ. ಆದರೆ, ಬಿಜೆಪಿ ಪಕ್ಷದಲ್ಲಿ ಒಗ್ಗಟ್ಟು ಕಾಣತಾಯಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಉಚ್ಚಾಟನೆ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನಮ್ಮ ಗುರಿ ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಎನ್ನುವುದು ಎಂದರು.
ಜಾತಿ ಗಣತಿ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜಾತಿ ಗಣತಿ ಬಗ್ಗೆ ಕಾಳಜಿ ಇಲ್ಲ. ಚುನಾವಣೆ ಗೆಲ್ಲಬೇಕು ಎನ್ನುವುದಕ್ಕಾಗಿ ಈ ತರಹ ಬೂಟಾಟಿಕೆ ಮಾಡುತ್ತಾರೆ. ನಾಲ್ಕು ಗಂಟೆ ಅಲ್ಲ ನಾಲ್ಕು ವರ್ಷ ಆದರೂ ಜಾತಿ ಗಣತಿ ಮಾಡಲು ಸಾಧ್ಯವಿಲ್ಲ ಎಂದರು.
ಜನಾಕ್ರೋಶ ಯಾತ್ರೆ ರಾಜ್ಯಾದ್ಯಂತ ಯಶಸ್ವಿಯಾಗಿದೆ. ಜನತೆ, ಕಾರ್ಯಕರ್ತರು ಬೆಂಬಲ ನೀಡುತ್ತಿದ್ದಾರೆ. ಭ್ರಷ್ಟ, ಜನ ವಿರೋಧಿ ಸರ್ಕಾರದ ವಿರುದ್ಧ ಜನತೆ ಬೀದಿಗೆ ಇಳಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ಬಿಟ್ಟು ಹಳ್ಳಿಗಳಿಗೆ ಬರಲ್ಲ ಎಂದು ಟೀಕಿಸುತ್ತ, ಗ್ಯಾರಂಟಿಗಳ ವಿರುದ್ಧವೂ ಕಿಡಿಕಾರಿದರು.