ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸಿಎಂ ವಿಜಯ್ ಆಡಳಿತದಲ್ಲಿ ಮಹತ್ವದ ಬದಲಾವಣೆಯತ್ತ ದಿಟ್ಟ ಹೆಜ್ಜೆ ಇಟ್ಟಿದ್ದು, ಭ್ರಷ್ಟಾಚಾರ ವಿರುದ್ಧ ಸಮರ ಸಾರಿದ್ದಾರೆ.
ಸಾಕ್ಷಿ ಸಮೇತ ದೂರು ನೀಡಿ
ರಾಜ್ಯದ ಯಾವುದೇ ಸರ್ಕಾರಿ ನೌಕರ ಲಂಚಕ್ಕೆ ಬೇಡಿಕೆ ಇಟ್ಟರೆ, ಈ ಕುರಿತು ಸಂತ್ರಸ್ತರು ಯಾವುದೇ ರೀತಿಯ ಭಯವಿಲ್ಲದೇ ಸಾಕ್ಷಿ ಸಮೇತ ದೂರು ನೀಡಬಹುದಾಗಿದ್ದು, ಇದಕ್ಕಾಗಿ ಹೊಸ ಯೋಜನೆ ತರಲು ನಿರ್ಧರಿಸಿದ್ದಾರೆ.
1 ಲಕ್ಷ ನಗದು ಬಹುಮಾನ ಘೋಷಣೆ
ಸರಿಯಾದ ಸಾಕ್ಷ್ಯದೊಂದಿಗೆ ಭ್ರಷ್ಟಾಚಾರವನ್ನು ಬಯಲಿಗೆಳೆದರೆ ದೂರುದಾರರಿಗೆ ಸರ್ಕಾರವು 1 ಲಕ್ಷ ನಗದು ಬಹುಮಾನವನ್ನು ನೀಡಿ ಗೌರವಿಸಲಿದೆ. ಇದಕ್ಕಾಗಿ ವಿಶೇಷ ಟೋಲ್ ಫ್ರೀ ಸಹಾಯವಾಣಿಯನ್ನೂ ಸರ್ಕಾರ ಆರಂಭಿಸಿದೆ.
ಸಿಎಂ ವಿಜಯ್ ತನ್ನ ಸರಕಾರದಲ್ಲಿ ಲಂಚ, ಅಕ್ರಮ ಪಿಡುಗನ್ನು ಸಂಪೂರ್ಣವಾಗಿ ತೊಡೆದುಹಾಕಲು ಪಣತೊಟ್ಟಿದ್ದಾರೆ. ಈ ಮೂಲಕ ಜನರಿಗೆ ಪಾರದರ್ಶಕ ಆಡಳಿತ ನೀಡಲು ಮುಂದಾಗಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿ
ರಾಜ್ಯದ ಇಲಾಖೆಗೆ ಯಾವುದೇ ಒತ್ತಡವಿಲ್ಲದೆ ಕಾರ್ಯನಿರ್ವಹಿಸುವ ಸಂಪೂರ್ಣ ಅಧಿಕಾರ ನೀಡಲಾಗುತ್ತಿದೆ. ಒಂದು ವೇಳೆ ಸರ್ಕಾರಿ ಅಧಿಕಾರಿಗಳು ಕೇವಲ 1,000 ದಷ್ಟು ಸಣ್ಣ ಮೊತ್ತದ ಲಂಚ ಕೇಳಿದ್ದರೂ ಸಾರ್ವಜನಿಕರು ಹೆದರದೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಬಹುದು. ಈ ಸಂಬಂಧ ಸೂಕ್ತ ವಿಡಿಯೋ ಸಾಕ್ಷ್ಯವನ್ನು ಒದಗಿಸಬೇಕಾಗುತ್ತದೆ. ಸಾಕ್ಷ್ಯಗಳು ದೃಢಪಟ್ಟರೆ ದೂರುದಾರರಿಗೆ ಸರ್ಕಾರವು 1 ಲಕ್ಷ ನಗದು ಬಹುಮಾನವನ್ನು ನೀಡಿ ಗೌರವಿಸಲಿದೆ.
ಮಾದಕ ದ್ರವ್ಯ ವಿರುದ್ಧವೂ ಕಠಿಣ ನಿಲುವು
ಈಗಾಗಲೇ ಸಿಎಂ ವಿಜಯ್ ಸರಕಾರದಲ್ಲಿ ಮಹತ್ತರ ಬದಲಾವಣೆಯತ್ತ ಗಮನಹರಿಸಿದ್ದು, ರಾಜ್ಯದಲ್ಲಿ ಮಾದಕ ದ್ರವ್ಯ ಮತ್ತು ಅಕ್ರಮ ಔಷಧಿ ದಂಧೆಯ ವಿರುದ್ಧವೂ ಕಠಿಣ ನಿಲುವು ತಳೆದಿದೆ. ಈಗಾಗಲೇ ಡ್ರಗ್ಸ್ ಸಾಗಾಟ ಮತ್ತು ಮಾರಾಟದಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಸಿಎಂ ವಿಜಯ್ ಎಚ್ಚರಿಸಿದ್ದಾರೆ.



