ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲಿನ ದರ ಏರಿಕೆ ಬಗ್ಗೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಹಾಲಿನ ದರ ಏರಿಕೆಗೆ ಕೆಎಂಎಫ್ ಪಟ್ಟು ಹಿಡಿದಿದ್ದು, ಇಂದು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆ ಸಭೆ ನಡೆಸಲಾಗುತ್ತಿದೆ.
ಇಂದು ಸಂಜೆ 6 ಗಂಟೆಗೆ ಕೆಎಂಎಫ್ ಪದಾಧಿಕಾರಿಗಳ ಜತೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಹಾಲಿನ ದರ ಏರಿಕೆ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.
ಪ್ರತೀ ಲೀಟರ್ ಹಾಲಿನ ಬೆಲೆಯನ್ನು ಐದು ರೂಪಾಯಿಗೆ ಏರಿಕೆ ಮಾಡಬೇಕು ಎಂದು ಎಲ್ಲಾ ಹಾಲು ಮಾರಾಟ ಒಕ್ಕೂಟಗಳು ಈಗಾಗಲೇ ಪ್ರಸ್ತಾವನೆ ಸಲ್ಲಿಸಿವೆ. ಹಾಲಿನ ದರ ಹೆಚ್ಚಳ ಮಾಡಿ ಎರಡು ವರ್ಷವಾಗಿದೆ. ಇದರಿಂದಾಗಿ 15 ಹಾಲು ಒಕ್ಕೂಟಗಳು ನಷ್ಟದಲ್ಲಿದೆ ಎನ್ನಲಾಗಿದೆ.
ಇದೀಗ ಲೀ ಟೋನ್ಡ್ ಹಾಲಿನ ಲೀಟರ್ ಬೆಲೆ 39 ರೂಪಾಯಿಗಳಾಗಿವೆ. ಇದರಲ್ಲಿ ಹಾಲು ಉತ್ಪಾದಕರ ಸಂಘಕ್ಕೆ 35.50 ಪೈಸೆ ಹೋಗುತ್ತಿದೆ, ಇನ್ನು ಮಾರಾಟಗಾರರಿಗೆ ಲೀಟರ್ಗೆ ಎರಡು ರೂಪಾಯಿ ಕಮಿಷನ್, ಉಳಿದ 1.50 ಪೈಸೆ ಲಾಭದಿಂದ ಯಾವ ವ್ಯವಹಾರವೂ ಆಗುತ್ತಿಲ್ಲ ಎಂದು ಒಕ್ಕೂಟ ಹೇಳುತ್ತಿದೆ.
ಪ್ರತೀ ಲೀಟರ್ಗೆ ಐದು ರೂಪಾಯಿ ಹೆಚ್ಚಳಕ್ಕೆ ಅವಕಾಶ ನೀಡದಿದ್ದರೆ ಒಕ್ಕೂಟಗಳು ಸಾಲದ ಸುಳಿಯಲ್ಲಿ ಸಿಲುಕುತ್ತವೆ ಎಂದು ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತಿದೆ.