ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮತ್ತೆ ಸಿಎಂ ಚರ್ಚೆ ಶುರುವಾಗಿದ್ದು, ನಾನು ಯಾಕೆ ಸಿಎಂ (Chief Minister) ಆಗಬಾರದು? ಮುನಿಯಪ್ಪ ಯಾಕಾಗಬಾರದು? ಮಹಾದೇವಪ್ಪ ಯಾಕೆ ಆಗಬಾರದು ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಪ್ರಶ್ನಿಸಿದ್ದಾರೆ.
ಬೆಂಗಳೂರಿನ ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ದಲಿತ ಸಮುದಾಯದ ಸಚಿವರಿಗೆ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಪರಮೇಶ್ವರ್, ನಮ್ಮಲ್ಲಿ ಕೀಳರಿಮೆ ಇರಬಾರದು. ನಾನು ಯಾವಾಗಲೂ ನಾನು ಸಿಎಂ ಆಗಬೇಕು ಅಂತ ಹೇಳುತ್ತೇನೆ. ನಮಗೆ ಸಿಎಂ ಆಗುವ ಅವಕಾಶಗಳನ್ನು ತಪ್ಪಿಸಿದ್ದಾರೆ. ನಮ್ಮಲ್ಲಿ ಒಗ್ಗಟ್ಟು ಇದ್ದರೆ ಮಾತ್ರ ನಾವು ಉಳಿದುಕೊಳ್ಳುತ್ತೇವೆ. ಅದು ಬಿಟ್ಟು ಎಡ, ಬಲ ಎಂದು ಹೇಳುತ್ತಿದ್ದರೆ ನಾವು ಏನು ಸಾಧನೆ ಮಾಡುವುದಿಲ್ಲ. ನಮ್ಮಲ್ಲಿ ಒಗ್ಗಟ್ಟಿನ ಮಂತ್ರ ಇರಬೇಕು ಎಂದರು.
ನನ್ನ ನೇತೃತ್ವದಲ್ಲಿ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದ್ರೆ ಪರಮೇಶ್ವರ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂತು ಯಾರೂ ಹೇಳಲಿಲ್ಲ. ನನ್ನ ನೇತೃತ್ವದಲ್ಲಿ ಅಧಿಕಾರ ಬಂತು ಎಂದು ನಾನು ಹೇಳಿಕೊಳ್ಳಲಿಲ್ಲ. ಆದ್ರೆ, 2018ರಲ್ಲಿ ದಲಿತರನ್ನು ಕಡೆಗಣಿಸಿದ್ದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೋಲಾಯಿತು. ಯಾವ ಸಮುದಾಯ ಕಡೆಗಣಿಸಿದ್ರೋ ಅವರಿಂದ ಪಾಠ ಕಲಿಬೇಕಾಯ್ತು ಎಂದು ಪರೋಕ್ಷವಾಗಿ ತಮನ್ನು ಸಿಎಂ ಮಾಡದೇ ಕಡೆಗಣಿಸಿದಕ್ಕೆ 2018ರಲ್ಲಿ ಕಾಂಗ್ರೆಸ್ ಸೋಲಾಯ್ತು ಎಂದು ಹೇಳಿದರು.
ಮುಸ್ಲಿಮರು 100% ನಮ್ಮ ಕೈ ಹಿಡಿದಿದ್ದಾರೆ ಅಂತ ಮಾತನಾಡುತ್ತಾರೆ. ನಮ್ಮ ಬಗ್ಗೆ ಈಗ ಎಲ್ಲರಿಗೆ ಗೊತ್ತಾಗಿದೆ. 51 ಮೀಸಲು ಕ್ಷೇತ್ರಗಳ ಪೈಕಿ 32 ರಲ್ಲಿ ಗೆದ್ದಿದ್ದೇವೆ. ನಮ್ಮ ಪಕ್ಷದ ಪ್ರಣಾಳಿಕೆ ಸಮಿತಿಗೆ ನಾನೇ ಅಧ್ಯಕ್ಷನಾಗಿದ್ದೆ. ಪ್ರಣಾಳಿಕೆಯಲ್ಲಿ ಹೇಳಿದಂತೆ ಮೊದಲ ಅಧಿವೇಶನದಲ್ಲಿ ಸದಾಶಿವ ಆಯೋಗ ವರದಿ ಮಂಡಿಸುತ್ತೇವೆ ಎಂದರು.