ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜಿರಾ ಬ್ಯಾನರ್ಜಿ ಅವರನ್ನು ಸಿಬಿಐ ಇಂದು ವಿಚಾರಣೆಗೆ ಒಳಪಡಿಸಿದೆ.
ಈ ಹಿಂದೆ ಅಭಿಷೇಕ್ ಪತ್ನಿ ನೀಡಿದ ಹೇಳಿಕೆಗೆ ತಮ್ಮ ಬಳಿ ಇರುವ ಸಾಕ್ಷ್ಯಗಳು ಅಸಮಂಜಸವಾಗಿದೆ ಎಂದು ಸಿಬಿಐ ಹೇಳಿಕೊಂಡಿದೆ. ಪ್ರಮುಖವಾಗಿ ವಿದೇಶಿ ಬ್ಯಾಂಕ್ ನಲ್ಲಿರುವ ಖಾತೆಗಳಿಗೆ ಸಂಬಂಧಿಸಿದಂತೆ ರುಜಿರಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಮಹಿಳಾ ಅಧಿಕಾರಿಯನ್ನು ಒಳಗೊಂಡ ಎಂಟು ಸದಸ್ಯರ ಸಿಬಿಐ ತಂಡವು ಬೆಳಿಗ್ಗೆ 11.30 ರ ಸುಮಾರಿಗೆ ಹರೀಶ್ ಮುಖರ್ಜಿ ರಸ್ತೆಯಲ್ಲಿರುವ ಬ್ಯಾನರ್ಜಿ ಅವರ ನಿವಾಸಕ್ಕೆ ತಲುಪಿತ್ತು. ಪ್ರರುಜಿರಾ ಬ್ಯಾನರ್ಜಿ ಅವರನ್ನುಸಿಬಿಐ ಪ್ರಶ್ನೆ ಮಾಡಿದೆ.
ಮೂಲಗಳ ಪ್ರಕಾರ, ಕಳೆದ ವಾರ ರುಜಿರಾ ಬ್ಯಾನರ್ಜಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ಮತ್ತೊಮ್ಮೆ ವಿಚಾರಣೆ ನಡೆಸಲಾಗುವುದು ಎಂದು ಹೇಳಿತ್ತು.
ಅಸನ್ಸೋಲ್ ಬಳಿಯ ಕುನುಸ್ಟೋರಿಯಾ ಮತ್ತು ಕಜೋರಾ ಪ್ರದೇಶಗಳಲ್ಲಿ ಈಸ್ಟರ್ನ್ ಕೋಲ್ ಫೀಲ್ಡ್ಸ್ ನ ಗುತ್ತಿಗೆ ಗಣಿಗಳಲ್ಲಿ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಸಿಬಿಐ ಪ್ರಕಾರ, 1,300 ಕೋಟಿ ರೂಪಾಯಿಗಳ ಹಣಕಾಸು ವಹಿವಾಟಿನ ಬಗ್ಗೆ ತನಿಖೆಗಳು ಸುಳಿವು ನೀಡಿವೆ. ಹವಾಲಾ ಮೂಲಕ ಈ ಪ್ರಭಾವಿ ವ್ಯಕ್ತಿಗಳ ವಿದೇಶಿ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.