ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯವಾಡದಲ್ಲಿ ರಾತ್ರಿ ಧಾರಾಕಾರವಾಗಿ ಮಳೆ ಸುರಿದ ಹಿನ್ನಲೆಯಲ್ಲಿ ಕನಕದುರ್ಗಾ ದೇವಸ್ಥಾನದ ಬಳಿ ಭೂಕುಸಿತ ಉಂಟಾಗಿದ್ದು, ಭಾರೀ ಅನಾಹುತ ತಪ್ಪಿದೆ. ದೇವಸ್ಥಾನದ ಮುಡಿ ಕೊಡುವ ಜಾಗದಲ್ಲಿದ್ದ ಬೆಟ್ಟ ಏಕಾಏಕಿ ಕುಸಿದು ಬಿದ್ದಿದೆ. ಕೆಳಗಡೆ ಪಾರ್ಕ್ ಮಾಡಿದ್ದ ಬೈಕ್ಗಳು ಧ್ವಂಸಗೊಂಡಿವೆ. ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ಭಕ್ತಾದಿಗಳು ಪರದಾಡುತ್ತಿದ್ದಾರೆ.
ಬೆಳಗ್ಗೆ 10.30ರ ಸುಮಾರಿಗೆ ಈ ಘಟನೆ ನಡೆದಿದ್ದು, ದುರ್ಗಿಗುಡಿಯಲ್ಲಿ ಈ ಹಿಂದೆ ಭೂಕುಸಿತ ಸಂಭವಿಸಿದ ದಾಖಲೆಗಳೇ ಇಲ್ಲ ಅಂತಿದಾರೆ ಸ್ಥಳೀಯರು. ಘಟನೆ ತಿಳಿದ ಬೆನ್ನಲ್ಲೇ ಅಧಿಕಾರಿಗಳು ರಕ್ಷಣಾ ಕ್ರಮ ಕೈಗೊಂಡಿದ್ದಾರೆ. ರಸ್ತೆಯಲ್ಲಿ ಬಿದ್ದಿರುವ ಗುಡ್ಡ ಕುಸಿತವನ್ನು ತೆಗೆದು ವಾಹನ ಸುಗಮ ಸಂಚಾರಕ್ಕೆ ಕ್ರಮಕೈಗೊಳ್ಳಲಾಗಿದೆ. ಭೂಕುಸಿತದ ವೇಳೆ ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆಯಾಗಿದ್ದರಿಂದ ಭಾರೀ ಅನಾಹುತ ತಪ್ಪಿದೆ.
ಭೂಕುಸಿತ ಪ್ರದೇಶದಲ್ಲಿ ಯಾರೂ ಇಲ್ಲದಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಈ ಘಟನೆಯ ಕುರಿತು ಪುರಸಭೆಯ ಆಯುಕ್ತರಿಗೆ ಮಾಹಿತಿ ನೀಡಲಾಗಿದ್ದು, ಮಣ್ಣನ್ನು ತೆಗೆಸುವ ಮೂಲಕ ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದೆ.