ಹೊಸ ದಿಗಂತ ವರದಿ, ಅಂಕೋಲಾ:
ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳವಳ್ಳಿ ಕನಕನಹಳ್ಳಿಯಲ್ಲಿ ಮನೆಯೊಂದರ ಅಂಗಳದಲ್ಲಿ ಸಂಗ್ರಹಿಸಿಟ್ಟ ಎರಡು ಅಡಿಕೆ ಮೂಟೆಗಳನ್ನು ಕಳುವು ಮಾಡಿದ ಆರೋಪಿಗಳನ್ನು ಅಂಕೋಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಳವಳ್ಳಿ ಮಳಲಗಾವ್ ನಿವಾಸಿ ಕೃಷ್ಣ ನಾಗಪ್ಪ ಸಿದ್ಧಿ (19) ಮತ್ತು ರವಿಚಂದ್ರ ಅನಂತ ಸಿದ್ಧಿ (19) ಬಂಧಿತ ಆರೋಪಿಗಳಾಗಿದ್ದು ಇವರಿಂದ ಕಳ್ಳತನ ಮಾಡಿದ ಸುಮಾರು 60 ಸಾವಿರ ರೂಪಾಯಿ ಮೌಲ್ಯದ ಜಾಲಿ ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ ಮೋಟಾರು ಬೈಕ್ ವಶಪಡಿಸಿಕೊಳ್ಳಲಾಗಿದೆ.
ಕನಕನಹಳ್ಳಿ ನಿವಾಸಿ ಮಹಾಬಲೇಶ್ವರ ನರಸಿಂಹ ಭಟ್ಟ ಎನ್ನುವವರು ತಮ್ಮ ಮನೆ ಅಂಗಳದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಅಡಿಕೆ ಮೂಟೆಗಳನ್ನು ರಾಶಿ ಮಾಡಿಟ್ಟಿದ್ದು ಸೆಪ್ಟೆಂಬರ್ 14 ರ ರಾತ್ರಿ ಅದರಿಂದ 60 ಕೆ.ಜಿ ತೂಕದ ಎರಡು ಅಡಿಕೆ ಚೀಲಗಳನ್ನು ಕಳುವು ಮಾಡಲಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಲಾಗಿತ್ತು.
ಆರೋಪಿಗಳ ಪತ್ತೆಗೆ ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಮಾರ್ಗದರ್ಶನದಲ್ಲಿ ಪಿ.ಎಸ್. ಐ ಪ್ರವಿಣಕುಮಾರ್, ಮಹಾಂತೇಶ ವಾಲ್ಮೀಕಿ, ಸಿಬ್ಬಂದಿಗಳಾದ ಸುಬ್ರಾಯ ಭಟ್ಟ, ಸಚಿನ ನಾಯಕ, ಪರಮೇಶ.ಎಸ್, ಶೇಖರ ಸಿಧ್ಧಿ, ಶ್ರೀಕಾಂತ ಕಟಬರ, ಮಂಜುನಾಥ ಲಕ್ಮಾಪುರ, ಚಾಲಕ ಜಗದೀಶ ನಾಯ್ಕ ಆವರನ್ನೊಳಗೊಂಡ ವಿಶೇಷ ತಂಡ ರಚಿಸಿ ಕೈಗೊಂಡ ಕಾರ್ಯಾಚರಣೆಯಲ್ಲಿ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.
ಅಂಕೋಲಾ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠೆ ಡಾ. ಸುಮನ್ ಪನ್ನೇಕರ್,ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್, ಡಿ.ವೈ.ಎಸ್. ಪಿ. ವೆಲೆಂಟನ್ ಡಿಸೋಜ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.