ಹೊಸದಿಗಂತ ವರದಿ, ತುಮಕೂರು :
ಕೆಲವು ಕಿಡಿಗೇಡಿಗಳು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಹೆಸರು ಹೇಳಿಕೊಂಡು ದೇಣಿಗೆ ಸಂಗ್ರಹ ಮಾಡುವುದು ಹಾಗೂ ಬಂಜೆತನಕ್ಕೆ ಔಷಧ ವಿತರಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ರೀತಿ ಔಷಧ ವಿತರಣೆ ಮಾಡುವ ಸಲುವಾಗಿ ಅಥವಾ ದೇಣಿಗೆ ಸಂಗ್ರಹಿಸುವ ಸಲುವಾಗಿ ಮಠದಿಂದ ಯಾವುದೇ ವ್ಯಕ್ತಿಯನ್ನು ನಿಯೋಜನೆ ಮಾಡಿಲ್ಲ ಮತ್ತು ನೇಮಕ ಮಾಡಿಲ್ಲ ಎಂದು ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ಎಸ್. ವಿಶ್ವನಾಥಯ್ಯ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಕಿಡಿಗೇಡಿಗಳು ಶ್ರೀ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಬಳಿ ಹೋಗಿ, ತಮ್ಮನ್ನು ದೇಣಿಗೆ ಸಂಗ್ರಹ ಮಾಡಲು ಹಾಗೂ ಬಂಜೆತನಕ್ಕೆ ಔಷಧ ವಿತರಣೆ ಮಾಡಲು ಮಠದಿಂದ ನಿಯೋಜನೆ ಮಾಡಲಾಗಿದೆ ಎಂದು ಸುಳ್ಳು ಹೇಳಿ ದೇಣಿಗೆ ಸಂಗ್ರಹ ಹಾಗೂ ಔಷಧ ವಿತರಣೆ ಮಾಡುತ್ತಿದ್ದಾರೆ. ಈ ವಂಚಕರ ಮಾತಿಗೆ ಮರುಳಾಗಿ ಸಾರ್ವಜನಿಕರು ಮೋಸ ಹೋಗಬಾರದು. ಹಿತೈಷಿಗಳು, ದೇಣಿಗೆ ಸಲ್ಲಿಸುವವರು ಮಠಕ್ಕೆ ನೇರವಾಗಿ ಅಥವಾ ಅಂಚೆ ಮುಖಾಂತರ ಖಾತೆಗೆ ನೇರವಾಗಿ ಸಲ್ಲಿಸಬಹುದು ಎಂದು ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ಎಸ್.ವಿಶ್ವನಾಥಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.