ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ ನಿರ್ದೇಶಕ ತರುಣ್ ಸುಧೀರ್ ,ನಟಿ ಸೋನಲ್ ಮೊಂತೆರೋ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಆಗಸ್ಟ್ 10ರಂದು ಈ ಜೋಡಿಯ ಆರತಕ್ಷತೆ ನಡೆದರೆ, 11ರ ಭಾನುವಾರ ಬೆಳಗ್ಗೆ 10;50 ರಿಂದ 11;35ರ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ತರುಣ್ ಮತ್ತು ಸೋನಾಲ್ ಸಪ್ತಪದಿ ತುಳಿಯಲಿದ್ದಾರೆ.
ಹೀಗಾಗಿ ಆಪ್ತರಿಗೆ ಲಗ್ನ ಪತ್ರಿಕೆ ಕೊಡುವ ಕೆಲಸದಲ್ಲಿ ತರುಣ್ ಬಿಜಿಯಾಗಿದ್ದಾರೆ.
ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿ ತರುಣ್ ಸುಧೀರ್ ಅವರು ಮದುವೆಯ ಆಮಂತ್ರಣ ನೀಡಿದ್ದಾರೆ. ಅದೇ ರೀತಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಅವರನ್ನು ಲಾಂಚ್ ಮಾಡಿದ್ದೇ ತರುಣ್ ಸುಧೀರ್. ‘ಕಾಟೇರ’ ಸಿನಿಮಾಗೆ ಆರಾಧನಾ ನಾಯಕಿಯಾಗಿ ನಟಿಸಿದರು. ಅವರಿಗೂ ವಿವಾಹದ ಆಮಂತ್ರಣ ನೀಡಲಾಗಿದೆ. ಈ ವೇಳೆ ಮಾಲಾಶ್ರೀ ಕೂಡ ಜೊತೆಗಿದ್ದರು.
ರಚಿತಾ ರಾಮ್, ಉಪೇಂದ್ರ, ರಾಘವೇಂದ್ರ ರಾಜ್ಕುಮಾರ್ ಅವರಿಗೂ ತರುಣ್ ಸುಧೀರ್ ಆಹ್ವಾನ ನೀಡಿದ್ದಾರೆ. ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಅದ್ದೂರಿ ಮದುವೆಯಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ.
ಅಶ್ವಿನಿ ಪುನೀತ್ ರಾಜ್ಕುಮಾರ್ , ಶಿವರಾಜ್ಕುಮಾರ್, ಗೀತಾ ದಂಪತಿಯನ್ನು ಭೇಟಿಯಾಗಿ ತರುಣ್ ಆಹ್ವಾನ ಪತ್ರಿಕೆ ನೀಡಿದ್ದಾರೆ.
ರಾಜಕೀಯ ಕ್ಷೇತ್ರದಲ್ಲೂ ಅನೇಕರ ಜೊತೆ ತರುಣ್ ಸುಧೀರ್ ಅವರು ಆತ್ಮೀಯತೆ ಹೊಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕರು ಈ ಮದುವೆಗೆ ಬರುವ ನಿರೀಕ್ಷೆ ಇದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರುಣ್ ಸುಧೀರ್ ಅವರು ಆಹ್ವಾನಿಸಿ ಬಂದಿದ್ದಾರೆ.