ಹೊಸದಿಗಂತ ವರದಿ ಬೇಲೂರು:
ದೇಶಿಯ ಪರಂಪರೆಯಲ್ಲಿನ ಸಣ್ಣ-ಪುಟ್ಟ ಕೈಗಾರಿಕೆಯಿಂದ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆ ಇಟ್ಟಿದೆ. ಪ್ರಧಾನಿ ನರೇಂದ್ರ ಮೋದಿರವರ ಆಶೋತ್ತರದಂತೆ ಗುಡಿ ಕೈಗಾರಿಕೆ ಮತ್ತು ಮಹಿಳೆಯರಿಗೆ ಸ್ವ-ಉದ್ಯೋಗ ನೀಡಲು ಸಹಾಯ ಹಸ್ತ ಮತ್ತು ಅರ್ಥಿಕ ನೆರವು ನೀಡುತ್ತಿದೆ. ಇಂತಹ ಅವಕಾಶಗಳನ್ನು ಮಹಿಳೆಯರು ಸದ್ಬಳಿಕೆ ಮಾಡಿಕೊಳ್ಳಬೇಕು ಎಂದು ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಕರೆ ನೀಡಿದರು.
ತಾಲೂಕಿನ ಹೆಬ್ಬಾಳು ಗ್ರಾಮದ ಉಜ್ವಲ ಸಂಜೀವಿನಿ ಒಕ್ಕೂಟದ ಶ್ರೀ ದೇವಿ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘದಿಂದ ತಯಾರಿಸಿದ ಉತ್ಪನ್ನಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈಗಾಗಲೇ ಮಹಿಳೆಯರ ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆಯಬೇಕು ಎಂಬ ಕಾರಣದಿಂದ ಹೈನುಗಾರಿಕೆ, ಹೊಲಿಗೆ, ಕರಕುಶಲ ಕೈಗಾರಿಕೆ, ಗೃಹ ಉತ್ಪನ್ನಗಳ ತಯಾರಿಕೆ ಸೇರಿದಂತೆ ನಾನಾ ಉತ್ಪನ್ನಗಳಿಗೆ ನೇರ ಅರ್ಥಿಕ ನೆರವು ಜೊತೆಗೆ ಸಹಾಯಧನ ನೀಡುತ್ತಾ ಬಂದಿದೆ.
ಕಳೆದ ಬಿಜೆಪಿ ಸರ್ಕಾರದಲ್ಲಿ ಕೂಡ ಮಹಿಳೆಯರ ಸಬಲೀಕರಣಕ್ಕೆ ಹತ್ತಾರು ಯೋಜನೆಗಳನ್ನು ರೂಪಿಸಿದೆ ಎಂದ ಅವರು ಇತ್ತೀಚಿನ ದಿನದಲ್ಲಿ ಕೇಂದ್ರ ಸರ್ಕಾರ ಅನುಷ್ಠಾನ ಮಾಡಿರುವ ವಿಶ್ವಕರ್ಮ ಸಮುದಾಯಕ್ಕೆ ಯೋಜನೆ ಮಹತ್ವಪೂರ್ಣವಾಗಿದೆ. ಒಂದು ಕಾಲಘಟ್ಟಕ್ಕೆ ಮಹಿಳೆ ಚೌಕಟ್ಟಿಗೆ ಸೀಮಿತವಾದ ದಿನಗಳಲ್ಲಿ ಆಕೆಗೆ ಶಿಕ್ಷಣ ನೀಡಿದ ಕಾರಣದಿಂದ ಮಹಿಳೆ ಇಂದು ಬಹುತೇಕ ಎಲ್ಲಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯ ಮೂಲಕ ಮಾದರಿಯಾಗಿದ್ದಾರೆ.
ಮಹಿಳೆಯರಿಂದಲೇ ಒಂದು ಕುಟುಂಬ ನಿರ್ವಹಣೆ ಸಾಧ್ಯವಾಗುತ್ತದೆ ಎಂಬ ನಿಟ್ಟಿನಲ್ಲಿ ಹೆಬ್ಬಾಳು ಶ್ರೀದೇವಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘ ಮಹಿಳೆಯರು ಇಂದು ಸಣ್ಣ ಪ್ರಮಾಣದಲ್ಲಿ ಉಪ್ಪಿನಕಾಯಿ ತಯಾರಿಕೆಗೆ ಮುಂದಾಗಿರುವುದು ನಿಜಕ್ಕೂ ಉತ್ತಮವಾಗಿದ್ದು, ಪುಷ್ಪಗಿರಿ ಮಹಾಸಂಸ್ಥಾನ ಮಠದ ಪೂಜ್ಯ ಪುಷ್ಪಗಿರಿ ಜಗದ್ಗುರುಗಳಿಂದ ಸ್ಥಾಪಿಸಿದ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸ್ವ-ಉದ್ಯೋಗ ಪರಿಕಲ್ಪನೆ ಜಿಲ್ಲೆಯಲ್ಲಿ ಖ್ಯಾತಿ ಪಡೆದಿದೆ.