ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಾಗಲೇ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದು, ತನ್ನೆಲ್ಲಾ ಗ್ಯಾರೆಂಟಿಗಳನ್ನು ಜಾರಿ ಮಾಡಿದೆ. ಈ ಗ್ಯಾರೆಂಟಿಗಳಿಗೆ ಸಂಬಂಧಿಸಿದಂತೆ ಬಿಜೆಪಿ ಗರಂ ಆಗಿದ್ದು, ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದೆ.
ಕಾಂಗ್ರೆಸ್ ಸರ್ಕಾರದ ವಿರುದ್ಧದ ಬಿಜೆಪಿ ಪ್ರತಿಭಟನೆ ಇದಾಗಿದೆ. 200 ಯುನಿಟ್ ಫ್ರೀ ಎಂದು ಹೇಳಿದ್ದು, ಇದೀಗ ಏನೇನೋ ಷರತ್ತುಗಳನ್ನು ವಿಧಿಸಲಾಗಿದೆ. ವಿದ್ಯುತ್ ಶುಲ್ಕ ಹೆಚ್ಚಿಸಿದೆ. ಅಷ್ಟೇ ಅಲ್ಲದೆ ಹಾಲಿನ ಪ್ರೋತ್ಸಾಹ ಧನ ಕಡಿತಗೊಳಿಸಿದೆ. ಈ ನಿರ್ಧಾರಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಷರತ್ತುಗಳನ್ನು ಹಿಂಪಡೆಯುವವರೆಗೂ ಪ್ರತಿಭಟನೆ ನಿಲ್ಲೋದಿಲ್ಲ ಎಂದಿದ್ದಾರೆ.
ಈ ಹಿಂದೆ 80 ಯುನಿಟ್ ಬಳಕೆ ಮಾಡುತ್ತಿದ್ದರೆ ಈಗ 90 ಯುನಿಟ್ ತನಕ ಬಳಕೆ ಮಾಡಿ ಆದರೆ ಅದನ್ನು ಮೀರುವಂತಿಲ್ಲ ಎಂದು ಸರ್ಕಾರ ಹೇಳಿದೆ, ಇದು ಹೇಗೆ ಸರಿ? 200 ಯುನಿಟ್ ಫ್ರೀ ಎಂದು ಹೇಳಿದಮೇಲೆ ಈಗ 60,70 ಎನ್ನೋದು ಸರಿಯಲ್ಲ ಎಂದಿದೆ. ಇನ್ನು ವಿದ್ಯುತ್ ಶುಲ್ಕ ಒಂದು ಯುನಿಟ್ಗೆ 70 ಪೈಸೆಯಷ್ಟು ಹೆಚ್ಚು ಮಾಡಲಾಗಿದೆ. ಅಂದರೆ 80 ಯುನಿಟ್ಗೆ 56 ರೂಪಾಯಿ ಹೆಚ್ಚಳ ಆಗಿದೆ. ಇಲ್ಲಿ ದುಡ್ಡು ಹೆಚ್ಚು ಮಾಡಿ ಅಲ್ಲಿ ಫ್ರೀ ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಹಾಲು ಉತ್ಪಾದನಾ ಪ್ರೋತ್ಸಾಹ ಧನವನ್ನು ಕಡಿಮೆ ಮಾಡಲಾಗಿದೆ, ಇಲ್ಲಿ ಹಣ ಉಳಿಸಿ ಬೇರೆಡೆ ಕೊಟ್ಟು ನುಡಿದಂತೆ ನಡೆದಿದ್ದೇನೆ ಎನಿಸಿಕೊಳ್ಳುತ್ತಿದ್ದಾರೆ. ಬಡವರ ಸರ್ಕಾರ ಇದಲ್ಲ ಎಂದಿದ್ದಾರೆ.