ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಗುಜರಾತ್ ನ ನವಸಾರಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ರಾಕೇಶ್ ದೇಸಾಯಿ ಪರ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಚುನಾವಣಾ ರ್ಯಾಲಿ ನಡೆಸಿದರು.
ಈ ವೇಳೆ ಮಾತನಾಡಿದ ಅವರು,ವಿರೋಧ ಪಕ್ಷವು ದೇಶವನ್ನು ಒಡೆಯಬಹುದು ಹೊರತು ಅದು ಒಗ್ಗೂಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮಾಡುತ್ತಿದೆಯೋ ಅಥವಾ ಭಾರತ್ ತೋಡೋ ಯಾತ್ರೆ ಕೈಗೊಂಡಿದೆಯೇ ಎಂಬುದು ತಿಳಿಯುತ್ತಿಲ್ಲ. ಪಕ್ಷದ ನಾಯಕರು ಭಾರತವನ್ನು ಒಗ್ಗೂಡಿಸಿ ಎನ್ನುತ್ತಿದ್ದಾರೆ. ಆದರೆ, ನಿಜ ಜೀವನದಲ್ಲಿ ಅವರು ಏನು ಮಾಡುತ್ತಿದ್ದಾರೆ? ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ದೆಹಲಿಯ ಜೆಎನ್ ಯು ಗೆ ಹೋದರು ಮತ್ತು ಸಂಸತ್ತಿನ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಅಫ್ಜಲ್ ಗುರು ಪರವಾಗಿ ಘೋಷಣೆ ಕೂಗುವವರನ್ನು ಬೆಂಬಲಿಸಿದರು. ರಾಹುಲ್ ಜೆಎನ್ಯುನಲ್ಲಿದ್ದಾಗಲೂ ಕೆಲವರು ‘ಭಾರತ್ ತೇರೆ ತುಕ್ಡೆ ಹೊಂಗೆ, ಇನ್ಶಾ ಅಲ್ಲಾ ಇನ್ಶಾ ಅಲ್ಲಾ’ ಎಂಬ ಘೋಷಣೆಯನ್ನೂ ಕೂಗಿದ್ದರು. ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಬಗ್ಗೆ ನಿನ್ನೆಯ ನಿಮ್ಮ (ರಾಹುಲ್ ಗಾಂಧಿ) ಹೇಳಿಕೆ ಖಂಡನೀಯ. ಅವರು (ಕಾಂಗ್ರೆಸ್) ದೇಶವನ್ನು ಒಡೆಯಬಹುದು ಹೊರತು, ಒಗ್ಗೂಡಿಸಲು ಸಾಧ್ಯವಿಲ್ಲ ಎಂಬುದನ್ನು ಇದು ತೋರಿಸುತ್ತದೆ’ ಎಂದು ಅವರು ಟೀಕಿಸಿದರು.
ಇದೇ ವೇಳೆ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ ನಡ್ಡಾ, ಆಮ್ ಆದ್ಮಿ ಪಕ್ಷವು (ಎಎಪಿ) ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 350 ಸ್ಥಾನಗಳ ಪೈಕಿ 349 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿದೆ. ಅವರು ಇನ್ನಷ್ಟೇ ನಡೆಯಬೇಕಿರುವ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿಯೂ ಸ್ಪರ್ಧಿಸಿದ ಎಲ್ಲಾ 67 ಸ್ಥಾನಗಳಲ್ಲಿ ತಮ್ಮ ಠೇವಣಿ ಕಳೆದುಕೊಳ್ಳಲಿದ್ದಾರೆಎಂದರು.