ಹೊಸದಿಗಂತ ವರದಿ, ಬಾಗಲಕೋಟೆ:
ಜನವರಿ 15 ರಂದು ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ.
ಅವರು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬೆಳಗಲ್ಲ ಗ್ರಾಮದಲ್ಲಿ ಬಳಿ ಎಸ್ ಆರ್ ಕೆ ಶುಗರ್ ಕಾರ್ಖಾನೆ ಯ ಅಡಿಗಲ್ಲು ಸಮಾರಂಭ ಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡುತ್ತಾ, ಜನವರಿ ಡಿಕೆ ಶಿವಕುಮಾರ್ ಹಾಗೂ ನನ್ನ ನೇತೃತ್ವದಲ್ಲಿ ಎರಡು ತಂಡಗಳನ್ನು ರಚನೆ ಮಾಡಿ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ದಲ್ಲಿ ಪ್ರವಾಸ ಹಮ್ಮಿಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ಸರ್ಕಾರದ ಜನ ವಿರೋಧಿಯ ನೀತಿಗಳನ್ನು ಜನರಿಗೆ ಮಾಹಿತಿ ನೀಡಿ ಜಾಗೃತ ಮೂಡಿಸಲಾಗುವುದು .224 ಕ್ಷೇತ್ರದಲ್ಲಿ ಒಮ್ಮೆಲೇ ಸಂಚಾರ ಮಾಡಲು ಸಾಧ್ಯವಾಗುವುದಿಲ್ಲ.ಹೀಗಾಗಿ ಬೇರೆ ಬೇರೆ ತಂಡ ಮಾಡಿ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.
ಚುನಾವಣೆ ಸಮಯದಲ್ಲಿ ಡಿಕೆ ಶಿವಕುಮಾರ ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಾರೆ. ನಾನು ಮೈಸೂರು ಭಾಗದಲ್ಲಿ ಪ್ರವಾಸ ಮಾಡುತ್ತೇನೆ ಎಂದು ಸಿದ್ದರಾಮಯ್ಯನವರು ತಿಳಿಸಿದರು. ಬೆಳಗಾವಿ ಗಡಿ ವಿವಾದ ವಿಚಾರವಾಗಿ ಮಾತನಾಡಿ, ಗಡಿ ವಿಚಾರ ವಿವಾದವೇ ಅಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಇದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ, ದೆಹಲಿಯಲ್ಲಿ ಬಿಜೆಪಿ ಸರ್ಕಾರ ಇದೆ. ಯಾಕೆ ವಿವಾದ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.
ರಾಜಕಾರಣಕ್ಕೊಸ್ಕರ ಮಹಾರಾಷ್ಟ್ರದವರು ಯಾವಾಗಲೂ ಕ್ಯಾತೆ ತೆಗೆಯುತ್ತಾರೆ.ಮಹಾಜನ ವರದಿ ಪ್ರಕಾರ 1962ರಲ್ಲೇ ಇದು ಇತ್ಯರ್ಥ ಆಗಿದೆ. ಬೆಳಗಾವಿ ಕರ್ನಾಟಕದ್ದೂ ಅಂತ, ಒಂದಿಂಚು ಕೂಡ ಬಿಟ್ಟು ಕೊಡಲ್ಲ. ನೆಲ ಜಲ ಭಾಷೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಅಮಿತ್ ಶಾ ಹೇಳಿದ್ರು ಇಲ್ಲ, ನರೇಂದ್ರ ಮೋದಿ ಹೇಳಿದ್ರು ಇಲ್ಲ ಎಂದರು. ಇಂತಹ ವಿಚಾರದಲ್ಲಿ,ಸರ್ಕಾರ ವೀಕ್ ಆಗಬಾರದು. ಕಠಿಣ ಕ್ರಮ ತೆಗೆದುಕೊಳ್ಳಬೇಕು. ಪುಂಡಾಟಿಕೆ ಮಾಡಿದ್ರೆ ಅದಕ್ಕೆ ಕ್ರಮ ತೆಗೆದುಕೊಳ್ಳಬೇಕು. ಮಹಾರಾಷ್ಟ್ರದವರ ಪುಂಡಾಟಿಕೆಗೆಲ್ಲ ಹೆದರಿಕೊಳ್ಳೊಕಾಗುತ್ತಾ? ಇದು ಮೊದಲಿನಿಂದಲೂ ಮಾಡುತ್ತಾ ಬಂದಿದ್ದಾರೆ. ಕ್ರಮ ಏನೂ ಮಾಡ್ತಿಲ್ಲ. ಸಮಸ್ಯೆ ಕ್ರಿಯೆಟ್ ಮಾಡಬಾರದು ಎಂದರು.
ಬೊಮ್ಮಾಯಿ ವೀಕ್ ಲೀಡರ್ ಆಗಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು. ಹೈ ಕಮಾಂಡ್ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಸೂಚನೆ ನೀಡುತ್ತಾರೋ ಆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ. ಅದು ಬಾದಾಮಿ ಆಗಲಿ, ಕೋಲಾರ ಆಗಲಿ, ವರುಣ, ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಹೇಳುತ್ತಾರೋ ಆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ