ಹೊಸದಿಗಂತ ವರದಿ, ಕಲಬುರಗಿ:
ದೇಶದಲ್ಲಿ ಸತ್ತು ಹೋಗಿರುವ ಕಾಂಗ್ರೆಸ್ ಪಕ್ಷದ ಮೂಗುರಾಣಿಯನ್ನು ಮಲ್ಲಿಕಾರ್ಜುನ ಖರ್ಗೆ ಅವರ ಕೈಗೆ ನೀಡಿದ್ದು,ಇದರಿಂದಾಗಿ ರಾಜ್ಯದಲ್ಲಾಗಲಿ,ದೇಶದಲ್ಲಾಗಲಿ ಯಾವುದೇ ಪ್ರಯೋಜನ ಇಲ್ಲ. ಕಾಂಗ್ರೆಸ್ ಕಳೆದ 70 ವರ್ಷಗಳಿಂದ ಹಿಂದುಳಿದ ವರ್ಗಗಳನ್ನು ಕೇವಲ ಓಟ್ ಬ್ಯಾಂಕ್ ಆಗಿ ಮಾಡಿಕೊಂಡಿದ್ದು, ಆ ಸಮುದಾಯದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಶೂನ್ಯವಾಗಿದೆ ಎಂದು ಬಿಜೆಪಿ ವಿರಾಟ್ ಒಬಿಸಿ ಸಮಾವೇಶ ಉಸ್ತುವಾರಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಅಭಿವೃದ್ಧಿ ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯವಿದ್ದು, ಸಮುದಾಯದ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರ ಜತೆಗೆ ನೂರಾರು ಕೋಟಿ ರೂ. ಅನುದಾನ ಬಿಜೆಪಿ ಸರಕಾರ ನೀಡುತ್ತಿದೆ ಎಂದು ಹೇಳಿದರು.
ಭಾನುವಾರ ನಡೆಯಲಿರುವ ವಿರಾಟ ಅಹಿಂದ ಸಮಾವೇಶದಲ್ಲಿ 4 ಲಕ್ಷಕ್ಕೂ ಹೆಚ್ಚಿನ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ ಅವರು, ಕೆಲವು ನಾಲ್ಕು ಜನರು ಹೇಳಿದರೆ ಯಾವುದೇ ಸಮುದಾಯದವರು ಸಮಾವೇಶ ಬಹಿಷ್ಕಾರ ಮಾಡುವುದಿಲ್ಲ. ಸಮಾವೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕೋಲಿ, ಕಬ್ಬಲಿಗ, ಕುರುಬ ಸೇರಿ ಅಹಿಂದ ಸಮಾಜದ ಜನರು ಪಾಲ್ಗೊಳ್ಳಲಿದ್ದಾರೆ. ಮುಂದಿನ ಬಾರಿ 150ಕ್ಕೂ ಹೆಚ್ಚನ ಸ್ಥಾನ ಗೆಲ್ಲುವ ಮೂಲಕ ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಆಗುತ್ತಿರುವ ಘಟನೆಗಳಿಗೆ ನಾನೇ ಕಾರಣ ಎಂದು ಶಿವಕುಮಾರ ಹೇಳುತ್ತಾರೆ. ನಾವು ಗಲಾಟೆ ಮಾಡುವವರಲ್ಲ, ಅದನ್ನು ಸದೆಬಡೆಯುವವರು. ನಮಗೆ ಸಾವರಕರ್, ಆಜಾದ್ ಅವರು ಆದರ್ಶವಾಗಿದ್ದಾರೆ. ರಾಷ್ಟ್ರ ದ್ರೋಹಿ ಸಂಘಟನೆಗಳನ್ನು ಬ್ಯಾನ್ ಮಾಡೋದು ನಮ್ಮ ತಾಕತ್ತಾಗಿದ್ದುಘಿ, ಅದನ್ನು ಡಿಕೆಶಿ ತಿಳಿಕೊಂಡಿದ್ದಾರೆ. ನಾವು ರಾಷ್ಟ್ರದ್ರೋಹಿ ಸಂಘಟನೆ ಪಿಎ್ಐಯನ್ನು ಬ್ಯಾನ್ ಮಾಡಿಸಿದ್ದೇವೆ. ಆದರೆ ಅದೇ ಪಿಎ್ಐ ಮೇಲಿನ ನೂರಾರು ಕೇಸ್ಗಳನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ವಾಪಾಸ್ ಪಡೆದಿದೆ ಎಂದು ನೆನಪಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ, ಯಶಪಾಲ್ ಇತರರಿದ್ದರು.