ಹೊಸದಿಗಂತ ಮಂಡ್ಯ:
ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಆಗಬಾರದು ಎನ್ನುವ ಉದ್ದೇಶದಿಂದಲೇ ರಾಜ್ಯದಲ್ಲಿ ಅವಾಂತರಗಳನ್ನು ಕಾಂಗ್ರೆಸ್ ಸೃಷ್ಟಿಸುತ್ತಿದೆ, ಆದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ನಿರ್ನಾಮ ಆಗಲಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಭವಿಷ್ಯ ನುಡಿದರು.
ಇಲ್ಲಿನ ವಿದ್ಯಾನಗರದಲ್ಲಿ ನೂತನವಾಗಿ ತೆರೆದಿರುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಶಿಕ್ಷಣ ಕ್ಷೇತ್ರವು ಗಣನೀಯವಾಗಿ ಕುಸಿದಿದೆ, ಭಾರತದ ದೇಶದ ಭವಿಷ್ಯ ಚಿತ್ರಣವನ್ನು ನೋಡಿದ್ದೇವೆ, ಆದರೆ ಕರ್ನಾಟಕದ ಚಿತ್ರಣವನ್ನು ನೋಡುತ್ತಿದ್ದೇವೆ, ಏಕೆಂದರೆ ಐದು ಗ್ಯಾರಂಟಿಯನ್ನು ಕೊಟ್ಟ ಕಾಂಗ್ರೆಸ್ ಸರ್ಕಾರವು ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಏನಾಗಿದೆ ಎಂಬುದನ್ನು ನೋಡುತ್ತಿದ್ದೀರ ಎಂದು ತಿಳಿಸಿದರು.
ಶಿಕ್ಷಣ ಕ್ಷೇತ್ರಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಒತ್ತು ನೀಡಿದ್ದರು, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ್ದರು, ಅದರಂತೆ ಯಡಿಯೂರಪ್ಪ ಅವರು ಕೂಡ ಶಿಕ್ಷಣ ಕ್ಷೇತ್ರಕ್ಕೆ ಶ್ರಮಿಸಿದ್ದಾರೆ, ನಾನು ಸಹ ಮಂತ್ರಿಯಾಗಿದ್ದಾಗ ಶಾಲೆಗಳಲ್ಲಿ ಲೈಬ್ರರಿ, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡಿರುವ ಉದಾಹರಣೆಗಳು ಸಿಗುತ್ತವೆ, ನನ್ನ ಅವಧಿಯಲ್ಲಿ ಯಾರನ್ನೂ ವರ್ಗಾವಣೆ ಮಾಡಲು ಮತ್ತು ಅಮಾನತು ಮಾಡಲು ಬಿಡಲಿಲ್ಲ ಎಂದು ವಿವರಿಸಿದರು.