ಹೊಸದಿಗಂತ ವರದಿ,ವಿಜಯನಗರ:
ಬಿಜೆಪಿ ಸರ್ಕಾರದ ರೈತಪರ ಯೋಜನೆಗಳನ್ನು ಕೈಬಿಟ್ಟ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಬಿಜೆಪಿ ರೈತ ಮೋರ್ಚಾ ಸೇರಿದಂತೆ ಎಲ್ಲ ಮೋರ್ಚಾದ, ಪದಾಧಿಕಾರಿಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎನ್.ಕೊಟ್ರಶಪ್ಪ ಬಾಗಳೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾಧಿಕಾರಿಗಳವರ ಮೂಲಕ ಸಿ.ಎಂ.ಸಿದ್ದರಾಮಯ್ಯ ಅವರಿಗೆ ಮನವಿ ಪತ್ರವನ್ನು ರವಾನಿಸಿದರು.
ನಂತರ ಜಿಲ್ಲಾಧ್ಯಕ್ಷ ಎನ್.ಕೊಟ್ರೇಶಪ್ಪ ಬಾಗಳೆ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗಾಗಿ ಜಾರಿಗೊಳಿಸಿದ ಎಲ್ಲ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಕೈ ಬಿಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ. ಬಜೆಟ್ ನಲ್ಲಿ ಎಸ್ ಸಿಪಿ, ಟಿಎಸ್ ಪಿಗೆ ಯೋಜನೆಗೆ 14 ಸಾವಿರ ಕೋಟಿ ರೂ.ಮಿಸಲಿಡಲಾಗಿತ್ತು, ಅದನ್ನು ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳಿಗೆ ಬಳಕೆ ಮಾಡಲು ಮುಂದಾಗಿದೆ, ಇದು ಅತ್ಯಂತ ಖಂಡನೀಯ, ಎಸ್ಸಿ ಹಾಗೂ ಎಸ್ಟಿ ಅವರಿಗೆ ಮೀಸಲಿಟ್ಟ ಹಣ ಅವರಿಗೆ ಬಳಕೆಯಾಗಬೇಕು, ರೈತರ ಮಕ್ಕಳಿಗಾಗಿ ಅನುಷ್ಟಾನಕ್ಕೆ ತಂದಿದ್ದ ವಿದ್ಯಾನಿಧಿ, ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ವಿದ್ಯಾನಿಧಿ, ಜಿಲ್ಲೆಗೊಂದು ಗೋ ಶಾಲೆ, ಭೂ ಸಿರಿ ಯೋಜನೆ, ಕೃಷಿಭೂಮಿ ಮಾರಾಟ ಕಾಯ್ದೆ ಸೇರಿದಂತೆ ಅನೇಕ ಯೋಜನೆಗಳನ್ನು ಸರ್ಕಾರ ಕೈ ಬಿಟ್ಟಿದ್ದು, ಬರುವ ದಿನಗಳಲ್ಲಿ ಜನರೇ ಕಾಂಗ್ರೆಸ್ ಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಪ್ರಭಾಕರ್, ನಂಜುಂಡಪ್ಪ, ನಾಗಪ್ಪ, ಸಿದ್ದಪ್ಪ, ಕರಿಬಸಪ್ಪ, ಅಜ್ಜಪ್ಪ, ಅಂಜಿನೆಪ್ಪ, ಮಂಜುನಾಥ್, ಶಿವನಗೌಡ ಸೇರಿದಂತೆ ಇತರರಿದ್ದರು.