ಹೊಸದಿಗಂತ ವರದಿ, ಕಲಬುರಗಿ:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತರ ಪ್ರಗತಿಗೆ ಬಹುದೊಡ್ಡ ಕೊಡಲಿ ಪೆಟ್ಟು ನೀಡಿದ್ದು, ಪ್ರತಿ ಹೆಜ್ಜೆಯಲ್ಲೂ ದಲಿತ ವಿರೋಧಿ ನಡೆಯನ್ನು ಅನುಸರಿಸುತ್ತಿದೆ ಎಂದು ರಾಜ್ಯ ಕಾರ್ಯದರ್ಶಿ,ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ನೀತಿಯಿಂದಾಗಿ 2024-25 ರ ಬಜೆಟ್ ನಲ್ಲಿ ದಲಿತರಿಗೆ ಮೀಸಲಿಟ್ಟಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಲ್ಲ, ಅಲ್ಲದೇ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಪಿ, ಟಿಎಸ್ಪಿ ಅನುದಾನ ಬಳಕೆ ಅಕ್ಷಮ್ಯ ಅಪರಾಧವಾಗಿದವಾಗಿದೆ ಎಂದರು.
ದಲಿತರ ಮೂಲಸೌಕರ್ಯ ಅಭಿವೃದ್ಧಿ, ನವೋದ್ಯಮಕ್ಕೆ ಅನುಕೂಲ, ದಲಿತರ ಶಿಕ್ಷಣ ಸೇರಿದಂತೆ ಸಮಗ್ರ ಪ್ರಗತಿಗೆ ನೀಡಬೇಕಾಗಿದ್ದ ಅನುದಾನವನ್ನು ದುರ್ಬಳಕೆ ಮಾಡಿ, ದಲಿತರಿಗೆ ಮೋಸ ಮಾಡಿದ್ದು ಕೂಡಲೇ ಹಣ ವಾಪಸ್ ನೀಡಬೇಕು ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ, ನಗರಾಧ್ಯಕ್ಷ ಚಂದು ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಮರನಾಥ ಪಾಟೀಲ್, ನಿತೀನ್ ಗುತ್ತಿದಾರ್, ಸಂಗಮೇಶ ವಾಲಿ, ಸಂತೋಷ ಹಾದಿಮನಿ, ಶರಣು ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.