ಹೊಸದಿಗಂತ ವರದಿ, ಮೈಸೂರು:
ಮೇಕೆದಾಟು ಯೋಜನೆ ಜಾರಿಯ ವಿಚಾರದಲ್ಲಿ ನಮ್ಮ ಸರ್ಕಾರ ಅನಗತ್ಯವಾಗಿ ಕಾಲಹರಣ ಮಾಡಿಲ್ಲ, ಬಿಜೆಪಿಯವರು ಈ ಬಗ್ಗೆ ಮಾಡುತ್ತಿರುವ ಆರೋಪ ಶುದ್ಧ ಸುಳ್ಳು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸೋಮವಾರ ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಜತೆ ನಡೆದ ಜಂಟಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆಯ ಕೇಂದ್ರ ಸರ್ಕಾರಕ್ಕೆ ಡಿಪಿಆರ್ ಸಲ್ಲಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ನಲ್ಲಿ ತಮಿಳುನಾಡು ತಕರಾರು ಎತ್ತಿದ್ದರಿಂದ ಕಾರಣ ವಿಳಂಬವಾಯಿತು. ಆದರೆ ಈಗ ಸುಪ್ರೀಂ ಕೋರ್ಟ್ ಕುಡಿಯುವ ನೀರಿನ ಯೋಜನೆಗೆ ಯಾರೂ ಅಡ್ಡಿಪಡಿಸಬಾರದು ಎಂದು ಹೇಳಿದೆ. ಹಾಗಾಗಿ ಯಾವುದೇ ತಡೆ ಯೋಜನೆಗೆ ಇಲ್ಲ, ಆದರೂ ತಮಿಳುನಾಡು ತಕರಾರು ಮಾಡುತ್ತಿರುವುದು ಸರಿಯಲ್ಲ, ಸಾಮಾಜಿಕ ನ್ಯಾಯ, ಕಾನೂನು ಪ್ರಕಾರವಾಗಿ ವಿರೋಧಿಸಲು ತಮಿಳು ನಾಡಿಗೆ ಯಾವುದೇ ಹಕ್ಕಿಲ್ಲ. ಯಾವುದೇ ಅಡೆತಡೆ ಯೋಜನೆಗೆ ಇಲ್ಲದಿದ್ದರೂ ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದೆ. ತಮಿಳು ನಾಡಿನಲ್ಲಿ ಬಿಜೆಪಿ ಬೆಳೆಸಲು, ಮೇಕೆದಾಟು ಯೋಜನೆ ವಿರುದ್ಧ ತಮಿಳು ನಾಡಿನವರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ಆರೋಪಿಸಿದರು.