ಹೊಸದಿಗಂತ ವರದಿ, ಮೈಸೂರು:
ಹಿಜಾಬ್ ವಿಚಾರವಾಗಿ ಕಾಂಗ್ರೆಸ್ ಮುಸ್ಲಿಂರನ್ನು ಎತ್ತಿಕಟ್ಟಿ ರಾಜಕಾರಣ ಮಾಡುತ್ತಿದೆ ಎಂದು ಜೆಡಿಎಸ್ನ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಗುರುವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್, ಕೇಸರಿ ಶಾಲು ವಿವಾದ ದೊಡ್ಡದಾಗಬೇಕು ಎಂಬುದು ಸರ್ಕಾರದ ಇಚ್ಚೆ. ಕಿಡಿಯಂತಿದ್ದ ವಿವಾದ ಬೆಂಕಿಯಾಗಿ ರಾಜ್ಯ ಹಬ್ಬಲು ಸರ್ಕಾರವೇ ಕಾರಣ. ಸರ್ಕಾರ ತನ್ನ ಆಡಳಿತದ ವೈಫಲ್ಯ ಮುಚ್ಚಿಕೊಳ್ಳಲು ಈ ವಿಚಾರವನ್ನು ದೊಡ್ಡದು ಮಾಡುತ್ತಿದೆ ಎಂದು ಕಿಡಿಕಾರಿದರು.
ಹಿಜಾಬ್ ವಿಚಾರವಾಗಿ ಕಾಂಗ್ರೆಸ್ ಮುಸ್ಲಿಂರನ್ನು ಎತ್ತಿಕಟ್ಟಿ ರಾಜಕಾರಣ ಮಾಡುತ್ತಿದೆ. ಅದೇ ರೀತಿ ಬಿಜೆಪಿಯ ಅಂಗ ಸಂಸ್ಥೆಗಳು ಹಿಂದೂಗಳನ್ನ ಎತ್ತಕಟ್ಟಿ ರಾಜಕಾರಣ ಮಾಡುತ್ತಿವೆ. ಈ ಎರಡೂ ಪಕ್ಷಗಳ ಉದ್ದೇಶಕ್ಕೆ ವಿದ್ಯಾರ್ಥಿಗಳು ಬಲಿಯಾಗಬಾರದು. ಈಗ ಗಲಾಟೆ ಮಾಡಿದ ವಿದ್ಯಾರ್ಥಿಗಳ ಮೇಲೆ ಮುಂದೆ ಕೇಸ್ ಬೀಳುವುದು ನಿಶ್ಚಿತ. ಈಗ ಬಂಧನವಾಗಿರುವ ವಿದ್ಯಾರ್ಥಿಗಳಲ್ಲಿ ಯಾರು ಬಿಜೆಪಿ, ಕಾಂಗ್ರೆಸ್ ಮುಖಂಡರ ಮಕ್ಕಳಿಲ್ಲ. ಇದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.