ಯಾತ್ರೆ ನಿಲ್ಲಿಸಿ ಎಂದ ಸರಕಾರದ ವಿರುದ್ಧ ಕಾಂಗ್ರೆಸ್ ಗರಂ: ಅವರ ಮನಸ್ಥಿತಿಗೆ ಏನು ಹೇಳುವುದು ಎಂದ ಸಚಿವ ಮಾಂಡವಿಯಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದೇಶದಲ್ಲಿ ಕೊರೋನಾ ಮತ್ತೆ ಏರಿಕೆಯಾಗುವ ಲಕ್ಷಣ ಕಾಣುತ್ತಿದ್ದು, ಈ ಹಿನ್ನೆಲೆ ಭಾರತ್ ಜೋಡೋ ಯಾತ್ರೆಯ ವೇಳೆ ಕೋವಿಡ್-19ನಿಯಮಾವಳಿ ಪಾಲಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗೆ ಪತ್ರ ಬರೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷವನ್ನು ಮಾತ್ರ ಟಾರ್ಗೆಟ್ ಮಾಡುತ್ತಿದೆ. ಸಾರ್ವಜನಿಕವಾಗಿ ಜನರು ಸೇರುವುದಕ್ಕೆ ಯಾವುದೇ ನಿರ್ಬಂಧ ಇಲ್ಲದೇ ಇರುವ ಹೊತ್ತಲ್ಲಿ ಈ ರೀತಿ ಮಾಡುತ್ತಿದೆ ಎಂದು ಹೇಳಿದ್ದಾರೆ.

ಇತ್ತ ರಾಜಸ್ಥಾನದಲ್ಲಿ ಕೋವಿಡ್ -19 ಹರಡಬಾರದು ಎಂದು ಖಚಿತಪಡಿಸಿಕೊಳ್ಳಲು, ನಾನು ತಜ್ಞರ ಅಭಿಪ್ರಾಯಗಳನ್ನು ತೆಗೆದುಕೊಂಡೆ. ಯಾತ್ರೆಯಲ್ಲಿ ಕೋವಿಡ್ -19 ಪ್ರೋಟೋಕಾಲ್ ಅನ್ನು ಅನುಸರಿಸಬೇಕು ಎಂದು ರಾಹುಲ್ ಗಾಂಧಿಗೆ ಪತ್ರ ಬರೆದಿದ್ದೇನೆ ಎಂದು ಮಾಂಡವಿಯಾ ಪ್ರತಿಕ್ರಿಯಿಸಿದ್ದಾರೆ.

ಕೋವಿಡ್-19 ದೇಶದಲ್ಲಿ ಹರಡದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ಒಬ್ಬ ಸಚಿವರನ್ನು ಹೇಗೆ ಪ್ರಶ್ನಿಸುವುದು ಎಂದು ಯಾರಾದರೂ ಭಾವಿಸಿದರೆ, ಅವರ ಮನಸ್ಥಿತಿಗೆ ನಾವು ಏನು ಹೇಳುವುದು? ಈ ಬಗ್ಗೆ ನನ್ನನ್ನು ಪ್ರಶ್ನಿಸುವುದು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದಂತೆ’ ಎಂದು ಆರೋಗ್ಯ ಸಚಿವರು ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಸಚಿವರ ಪತ್ರಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, ಮಾಂಡವಿಯ ಅವರು ಸಾರ್ವಜನಿಕರ ಆರೋಗ್ಯ ಬಗ್ಗೆ ಕಾಳಜಿ ಹೊಂದಿದ್ದರೆ, ಇತ್ತೀಚೆಗೆ ಮುಕ್ತಾಯವಾದ ಗುಜರಾತ್ ವಿಧಾನಸಭಾ ಚುನಾವಣೆಗೆ ಪ್ರಚಾರ ಮಾಡಿದ ಬಿಜೆಪಿ ನಾಯಕರು ಯಾಕೆ ಈ ನಿಯಮಾವಳಿ ಪಾಲಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ಆ ಪ್ರೋಟೋಕಾಲ್ ಅನ್ನು ತಂದರೆ, ನಾವು ಅದನ್ನು ಅನುಸರಿಸುತ್ತೇವೆ. ಸಂಸತ್ ನಡೆಯುತ್ತಿದೆ, ಆದರೆ ನಾವು ಯಾವುದೇ ಕೋವಿಡ್-ಸಂಬಂಧಿತ ಪ್ರೋಟೋಕಾಲ್‌ಗಳನ್ನು ಅಲ್ಲಿ ನೋಡಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವರ ಪತ್ರದ ಕುರಿತು ಕಾಂಗ್ರೆಸ್ ನಾಯಕ ಭೂಪಿಂದರ್ ಹೂಡಾ ಪ್ರತಿಕ್ರಿಯಿಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!