ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಿಷತ್ ಸದಸ್ಯ, ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಪೆನ್ಡ್ರೈವ್ ಬಾಂಬ್ ಸಿಡಿಸಿದ್ದಾರೆ. ನಾನು ಸ್ಟಾರ್ ಕ್ಯಾಂಪೆನರ್. ನನ್ನ ಯಾರು ಉಪಯೋಗಿಸಿಕೊಳ್ಳಲು ಆಗುವುದಿಲ್ಲ. ನನ್ನ ಉಪಯೋಗ ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳುತ್ತೆ. ವೈಯಕ್ತಿಕ ರಾಜಕಾರಣ ಬೇರೆ ಇದು ಬೇರೆ. ಇದು ಕಾಂಗ್ರೆಸ್ ಪಕ್ಷದ ದೇಶದ ರಾಜಕಾರಣ. ಏನೇ ಭಿನ್ನಾಭಿಪ್ರಾಯ ಇದ್ರೂ ಪೆನ್ ಡ್ರೈವ್ ನಲ್ಲಿಟ್ಟು ಆಮೇಲೆ ಹೇಳ್ತಿನಿ ಎಂದಿದ್ದಾರೆ.
ಉಪಯೋಗ ಮಾಡಿ ಬಿಟ್ಟು ಬಿಡ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದೇನೂ ತೊಂದರೆ ಇಲ್ಲಾ ನಾನು ಕಾಂಗ್ರೆಸ್ ಪಕ್ಷದ ಸೇವಾದಳದಿಂದ ಬೆಳೆದು ಬಂದವನು. ಯೂಸ್ ಮಾಡಿ ಬಿಡೋದು ಅದು ಬೇರೆ ಪ್ರಶ್ನೆ. ನಾವು ಕಾಂಗ್ರೆಸ್ ಪಕ್ಷಕ್ಕೆ ಬಂದಿರೋದು ಪಕ್ಷ ನನ್ನನ್ನ ಯೂಸ್ ಮಾಡಲಿ ಅಂತ. ಬೇರೆ ಯಾರಿಗೂ ನಾನು ಯೂಸ್ ಆಗಲು ಬಿಟ್ಟೇ ಇಲ್ಲ. ದೆಹಲಿಯಿಂದ ರಾಜಕಾರಣ ಮಾಡಿದ್ದೇನೆ ಕಾಂಗ್ರೆಸ್ ಪಕ್ಷಕ್ಕಾಗಿ ಮಾಡಿದ್ದೇನೆ ಎಂದರು.
ನಾನು ಬೆಳಸಿದವರು ಬರೀ ಸಚಿವರಲ್ಲಾ ಇನ್ನು ಏನೇನೋ ಆಗಿದ್ದಾರೆ. ಅದಕ್ಕೆ ಎಲ್ಲವನ್ನೂ ಪೆನ್ ಡ್ರೈವ್ ನಲ್ಲಿ ಇಟ್ಟಿದ್ದೇನೆ. ಚುನಾವಣೆ ಆದ ಮೇಲೆ ಇಲ್ಲೇ ಬಂದು ಸುದ್ದಿಗೋಷ್ಠಿ ನಡೆಸುತ್ತೇನೆ. ರಾಜಕಾರಣದಲ್ಲಿ ಇದ್ದಾಗ ಅವೆಲ್ಲ ಬರ್ತಾ ಇರುತ್ತವೆ. ರಾಜಕಾರಣದಲ್ಲಿ ಹಲವಾರು ಮುಖವಾಡಗಳನ್ನ ನಾವು ನೋಡಬೇಕಾಗುತ್ತೆ. ಯಾರಾದರೂ ಏನೋ ಮಾಡಿದ್ರೆ ಅದಕ್ಕೆ ಉತ್ತರ ಕೊಡಲು ಆಗಲ್ಲ. ನನ್ನ ವೈಯಕ್ತಿಕ ನಿಷ್ಠೆ ಕಾಂಗ್ರೆಸ್ ಪಕ್ಷ, ತ್ರಿವರ್ಣ ಧ್ವಜ, ಎಐಸಿಸಿ ಅಧ್ಯಕ್ಷರ ಕುರ್ಚಿಗೆ, ಬಾಕಿದೆಲ್ಲವೂ ನಡೆಯುತ್ತಿರುತ್ತೆ ಹೋಗ್ತಾ ಇರುತ್ತೆ. ಚುನಾವಣೆ ಮುಗಿಯುವವರೆಗೂ ಭಿನ್ನಾಭಿಪ್ರಾಯ ಪೆನ್ ಡ್ರೈವ್ ನಲ್ಲಿಟ್ಟು ಬಳಿಕ ಬಹಿರಂಗ ಮಾಡ್ತಿನಿ ಎನ್ನುವ ಮೂಲಕ ಸ್ವ ಪಕ್ಷದವರ ವಿರುದ್ದವೇ ಪೆನ್ ಡ್ರೈವ್ ನಲ್ಲಿನ ಮಾಹಿತಿ ಬಹಿರಂಗ ಮಾಡುವ ಬಗ್ಗೆ ಬಿಕೆ ಹರಿಪ್ರಸಾದ್ ಬಾಂಬ್ ಸಿಡಿಸಿದ್ದಾರೆ.
2024 ಲೋಕಸಭಾ ಚುನಾವಣೆ ವಿಚಾರದಲ್ಲಿ ಖರ್ಗೆ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಅಮೃತ ಕಾಲ ಅಂತಿದ್ದ ಮೋದಿಯವರದ್ದು ಅನ್ಯಾಯ ಕಾಲ ಆಗಿದೆ. ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಮಾಡಿ ಪ್ರಣಾಳಿಕೆ ಸಿದ್ದ ಪಡಿಸಿದ್ದಾರೆ. ಮಹಿಳೆಯರು, ರೈತರಿಗೆ, ಕಾರ್ಮಿಕರಿಗೆ ನ್ಯಾಯ ಕೊಡುವ 25 ಅಂಶ ಒಳಗೊಂಡ ಪ್ರಣಾಳಿಕೆ ಬಿಡುಗಡೆ. ದೇಶದಲ್ಲಿ ಅರಾಜಕತೆ ಇದ್ದು, ಮಣಿಪುರ ಇನ್ನೂ ಹೊತ್ತಿ ಉರಿಯುತ್ತಿದೆ. ಹತ್ತು ವರ್ಷದಲ್ಲಿ ಅಮೃತಕಾಲ ಜನ ನೋಡಲಿಲ್ಲ ಅನ್ಯಾಯ ಕಾಲ ನೋಡಿದ್ದಾರೆ. ಈ ದಶಕವೇ ಬರ್ಬಾದ್ ದಶಕ ಎಂದು ಹರಿಪ್ರಸಾದ್ ಲೇವಡಿ ಮಾಡಿದರು.