ಹೊಸದಿಗಂತ ವಿಜಯಪುರ:
ವಿಜಯಪುರ ಲೋಕಸಭಾ ಮೀಸಲು ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಲಂಬಾಣಿ ಮಹಿಳೆಯರಿಗೆ ಹಣ ಹಂಚಿರುವ ಘಟನೆ ನಡೆದಿದೆ.
ನಗರದಲ್ಲಿ ಸೋಮವಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರು ನಾಮಪತ್ರ ಸಲ್ಲಿಸುವ ಮುನ್ನ ನಡೆದ ಬೃಹತ್ ರ್ಯಾಲಿಯಲ್ಲಿ ಲಂಬಾಣಿ ಮಹಿಳೆಯರಿಗೆ ಹಣ ಹಂಚಿಕೆ ಮಾಡಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೃತ್ಯ ಮಾಡುತ್ತಿದ್ದ ಪ್ರತಿಯೊಬ್ಬ ಲಂಬಾಣಿ ಮಹಿಳೆಯರಿಗೆ ಕಾಂಗ್ರೆಸ್ ಮುಖಂಡರೊಬ್ಬರು ಎರಡು ನೂರು ರೂಪಾಯಿ ಹಣವನ್ನು ಹಂಚಿದ್ದಾರೆ.
ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಈ ರೀತಿ ಹಣ ಹಂಚಿಕೆ ಮಾಡಿರುವುದು ಜಿಲ್ಲಾಡಳಿತದ ಚುನಾವಣೆಯ ಕಾರ್ಯವೈಖರಿ ಕುರಿತು ಇನ್ನಿಲ್ಲದ ಅನುಮಾನ ಮೂಡುವಂತಾಗಿದೆ.
ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಅಂಬೇಡ್ಕರ್ ವೃತ್ತದವರೆಗೆ ನಡೆದ ಬೃಹತ್ ರ್ಯಾಲಿಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರು, ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಸೇರಿದಂತೆ ಶಾಸಕರು ಭಾಗಿಯಾಗಿದ್ದರು.