ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ ನಡೆದಿದ್ದು, ನಂದಿನಿ ಲೇಔಟ್ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ.
ರವಿ ಅಲಿಯಾಸ್ ಮತ್ತಿರವಿ (42) ಕೊಲೆಯಾದ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಲಾಗಿದೆ.
ಈ ಘಟನೆ ಲಗ್ಗೆರೆ ಬಳಿಯ ಚೌಡೇಶ್ವರಿನಗರದ ಹಳ್ಳಿರುಚಿ ಹೊಟೇಲ್ ಮುಂಭಾಗದಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ. ಸಿಎಂಹೆಚ್ ಬಾರ್ ಬಳಿಯಿಂದ ರವಿಯನ್ನ ಅಟ್ಟಾಡಿಸಿದ ಕಿರಾತಕರು ಹಲ್ಲೆ ನಡೆಸಿದ್ದಾರೆ. ನಂತರ ದುಷ್ಕರ್ಮಿಗಳು ಹಳ್ಳಿರುಚಿ ಹೊಟೇಲ್ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿದ್ದು ಕೊನೆಗೆ ತಲೆಯ ಮೇಲೆ ಸೈಜ್ ಕಲ್ಲನ್ನು ಮತ್ತಿರವಿಯ ತಲೆ ಮೇಲೆ ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ವೃತ್ತಿಯಲ್ಲಿ ಟೆಂಪೋ ಟ್ರಾವೆಲ್ಲರ್ ಚಾಲಕನಾಗಿದ್ದ ರವಿ. ಸಂಜೆ ಕೆಲಸ ಮುಗಿಸಿ ಮನೆ ಹತ್ತಿರ ರವಿ ಬಂದಿದ್ದರು. ರವಿ ಮನೆಯಿಂದ ಹೊರ ಬರುತ್ತಿದ್ದಂತೆಯೆ ಹಂತಕರು ದಾಳಿ ಮಾಡಿದ್ದಾರೆ. ತಪ್ಪಿಸಿಕೊಳ್ಳೋ ಭರದಲ್ಲಿ ಓಡಿದ ರವಿಯನ್ನು ಕಿರಾತಕರು ಅಟ್ಟಾಡಿಸಿ ಹತ್ಯೆ ಮಾಡಿದ್ದಾರೆ.
ಸ್ಥಳಕ್ಕೆ ಬಂದ ನಂದಿನಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶವವನ್ನ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.