ಹೊಸದಿಗಂತ ವರದಿ,ಮೈಸೂರು:
ಕಾಂಗ್ರೆಸ್ ಸ್ವಾತಂತ್ರ್ಯ ಬಂದ ದಿನದಿಂದಲೂ ದಲಿತರು,ಹಿಂದುಳಿದ,ಅಲ್ಪಸoಖ್ಯಾತರನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಳಸಿಕೊಂಡಿದೆಯೇ ಹೊರತು ನಿಜವಾದ ಅಭಿವೃದ್ಧಿಮಾಡಲಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಮಾಜಿ ಸಚಿವ ಎನ್.ಮಹೇಶ್ ಟೀಕಿಸಿದರು.
ವರುಣ ವಿಧಾನಸಭಾ ಕ್ಷೇತ್ರದ ಗರ್ಗೆಶ್ವರಿ, ಹಾರೋಹಳ್ಳಿ-ಮೆಲ್ಲಹಳ್ಳಿ, ಭೈರಾಪುರ ಮಹಾಶಕ್ತಿ ಕೇಂದ್ರದ ಬಿಜೆಪಿ ಹಾಗೂ ಜಾ.ದಳದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯಸರ್ಕಾರದ ಜನವಿರೋಧಿ ನೀತಿಗಳನ್ನು ಹೇಳಬೇಕಿದೆ . ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಜಾತಿ,ಧರ್ಮಗಳ ಹೆಸರಿನಲ್ಲಿ ಒಡೆಯುತ್ತಿದೆ. ದಲಿತರ ವಿರೋಧಿ ಇದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಕಿಡಿಕಾರಿದರು.
ಪ್ರಧಾನಮಂತ್ರಿ ನರೇಂದ್ರಮೋದಿ ಸರ್ಕಾರ ತಂದಿರುವ ಹಲವಾರು ಯೋಜನೆಗಳುಬಡವರ ಮನೆ ತಲುಪುತ್ತಿದೆ. ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸಿದೆ. ಸ್ವಯಂ ಉದ್ಯೋಗ ಮಾಡಲು ನೆರವಾಗಿದೆ. ದೇಶ ಆರ್ಥಿಕವಾಗಿ ಮುಂದುವರಿದು ಜಗತ್ತಿನಲ್ಲೇ ಗಮನ ಸೆಳೆದಿದೆ ಎಂದರು..ಆದರೆ ಮೋದಿ ದೇಶದ ಪ್ರತಿಯೊಬ್ಬನಿಗೂ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಿದ್ದಾರೆ ಎಂದರು.ಮಹಾಶಕ್ತಿ ಕೇಂದ್ರದ ಅಧ್ಯಕ್ಷರು,ಪದಾಧಿಕಾರಿಗಳುತಮ್ಮ ಕೇಂದ್ರಗಳಲ್ಲೇ ಇದ್ದುಕೊಂಡು ಮತದಾರರ ಮನೆ ಮನೆಗೆ ತೆರಳಿ ನರೇಂದ್ರಮೋದಿ ಸರ್ಕಾರದಸಾಧನೆಗಳನ್ನು ಮನವರಿಕೆ ಮಾಡಿ ಬೂತ್ಗಳಲ್ಲಿ ಲೀಡ್ ಬರುವಂತೆ ಮಾಡಬೇಕು ಎಂದು ತಿಳಿಸಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಪ್ರಭಾರಿಯಾದ ಎಸ್.ಮಹದೇವಯ್ಯ ಮಾತನಾಡಿ, ಚುನಾವಣೆಯಲ್ಲಿ ಮತದಾರರಿಗೆ ಕಾಂಗ್ರೆಸ್ನಿoದ ಆಮಿಷವೊಡ್ಡುವ ಕೆಲಸ ನಡೆಯುತ್ತಿದೆ. ಬಿಜೆಪಿ ಕಾರ್ಯಕರ್ತರು ಮೋದಿ ಸರ್ಕಾರದಯೋಜನೆಗಳನ್ನು ಮನವರಿಕೆ ಮಾಡಿಕೊಡಬೇಕು. ಚಾಮರಾಜನಗರ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಗೆಲ್ಲುವಂತೆ ಮಾಡಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವಂತೆ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಮಾತನಾಡಿ. ಕೇಂದ್ರದಲ್ಲಿ ಮತ್ತೆ ಪ್ರಧಾನಿ ನರೇಂದ್ರಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಕಾರಣ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು. ದೇಶದ,ಕ್ಷೇತ್ರದ ಹಿತಕ್ಕಾಗಿ ನನಗೊಂದು ಅವಕಾಶ ಕಲ್ಪಿಸುವಂತೆ ಹೇಳಿದರು. ಕೊಳ್ಳೇಗಾಲ ಕ್ಷೇತ್ರದ ಶಾಸಕನಾಗಿ ಪಕ್ಷೇತನನಾಗಿ ಆಯ್ಕೆಯಾದರೂ ಸಾಕಷ್ಟು ಕೆಲಸ ಮಾಡಿದ್ದೇನೆ. ೨೦ ವರ್ಷಗಳಿಂದ ನಾನಾ ಕಾರಣಕ್ಕಾಗಿ ಅವಕಾಶದಿಂದ ವಂಚಿತನಾಗಿದ್ದ ನನಗೆ ಈಗ ಅವಕಾಶ ಕೊಟ್ಟಿದೆ.ಮತದಾರರು ಬೆಂಬಲಿಸಬೇಕು ಎಂದರು. ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ ಎಂದು ಟೀಕಿಸಿದರು.
ಸಭೆಯಲ್ಲಿ ಬಿಜೆಪಿ ಮುಖಂಡ ತೋಟದಪ್ಪ ಬಸವರಾಜಯ, ಜಿಪಂ ಮಾಜಿ ಸದಸ್ಯ ಬಿ.ಎನ್.ಸತೀಶ್, ಮಂಡಲ ಅಧ್ಯಕ್ಷ ಸತೀಶ್, ಶರತ್ ಪುಟ್ಟಬುದ್ದಿ ಮತ್ತಿತರರು ಹಾಜರಿದ್ದರು.