ಹೊಸದಿಗಂತ ವರದಿ ವಿಜಯಪುರ:
ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತದೆ ಎನ್ನುವುದು ಕೆಲವರ ಹಗಲು ಕನಸು ಎಂದು ಬಿಜೆಪಿ ವಿರುದ್ಧ
ಗೃಹ ಸಚಿವ ಜಿ. ಪರಮೇಶ್ವರ ಕಿಡಿಕಾರಿದರು.
ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಳ್ಳುತ್ತದೆ ಎನ್ನುವ ಪ್ರತಿಪಕ್ಷದವರ ಹೇಳಿಕೆಗೆ ಮಂಗಳವಾರ ನಗರದಲ್ಲಿ ಪ್ರತಿಕ್ರಿಯಿಸಿ, ಅವರು ಹಗಲು ಕನಸು ಕಾಣುತ್ತಿದ್ದಾರೆ. ಕನಸು ಕಾಣುವವರಿಗೆ ನಾವು ಬೇಡ ಎನ್ನಲು ಆಗಲ್ಲ. ಬಹಳ ಸಂತೋಷ. ಈ ರೀತಿ ಅನೇಕ ಆಸೆಗಳನ್ನ ಇಟ್ಟುಕೊಂಡಿರುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಮೂರು ಸಿಎಂ ಇದ್ದಾರೆಂದು ಪ್ರತಿಪಕ್ಷದ ನಾಯಕ ಆರ್ ಅಶೋಕ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರತಿಪಕ್ಷದವರ ಹೇಳಿಕೆಗೆ ಉತ್ತರ ಕೊಡೋಕೆ ಆಗಲ್ಲ. ಪ್ರತಿಪಕ್ಷದವರು ಇಲ್ಲ ಸಲ್ಲದ ಹೇಳಿಕೆ ಕೊಡುತ್ತಾರೆ. ಅದಕ್ಕೆಲ್ಲಾ ಉತ್ತರ ಕೊಡೋಕೆ ಆಗಲ್ಲ. ರಾಜ್ಯದಲ್ಲಿ ಭೀಕರ ಬರಗಾಲವಿದೆ. ಕೇಂದ್ರ ಸರ್ಕಾರ ಒಂದು ಬಿಡಿಗಾಸು ಬಿಡುಗಡೆ ಮಾಡಿಲ್ಲ ಎಂದು ದೂರಿದರು.
ಮೊದಲು ಹಣ ಬಿಡುಗಡೆ ಮಾಡೋಕೆ ಅವರಿಗೆ ಹೇಳಿ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಏನೆಲ್ಲಾ ಹಣ ಕೊಡಬೇಕು. ಅದು ನಮ್ಮ ಹಕ್ಕು, ಎನ್ ಡಿಆರ್ ಎಫ್ ನಿಯಮದಂತೆ 17 ಸಾವಿರ ಕೋಟಿ ನಷ್ಟದ ಮನವಿ ಕೊಟ್ಟಿದ್ದೇವೆ. ಬರಗಾಲಕ್ಕಾಗಿ ಒಂದು ಬಿಡಿಗಾಸು ಹಣ ಬಿಡುಗಡೆ ಮಾಡಿಲ್ಲ. ಅದನ್ನೆ ಕೇಳೋಕೆ ಹೇಳಿ ಅವರಿಗೆ ಮೊದಲು ಎಂದರು.
ಈ ವೇಳೆ ಜವಳಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮತ್ತಿತರರು ಇದ್ದರು.