ಹೊಸದಿಗಂತ ವರದಿ,ಮಂಡ್ಯ:
ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿ ಕಾರ್ಡ್ಗಳ ಭರವಸೆಗಳನ್ನು ಜಾರಿಗೆ ತಂದಿದೆ. ನಾನಾಗಲೀ ನನ್ನ ಕುಟುಂಬವಾಗಲೀ ಈ ಗ್ಯಾರಂಟಿಗಳನ್ನು ಪಡೆಯುವುದಿಲ್ಲ ಎಂದು ಬಿಜೆಪಿ ತಾಲೂಕು ಘಟಕದ ಉಪಾಧ್ಯಕ್ಷ ಶಿವಕುಮಾರ ಆರಾಧ್ಯ ಶಪಥ ಮಾಡಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮ ಭಾರತ ದೇಶದ ಭದ್ರತಾ ದೃಷ್ಟಿಯಿಂದ ನಮ್ಮ ರಾಜ್ಯದ ಹಿತದೃಷ್ಟಿಯಿಂದ ನಾನು ವೈಯಕ್ತಿಕವಾಗಿ ಯಾರ ಒತ್ತಡಕ್ಕೂ ಮಣಿಯದೇ ಸ್ವಯಂಪ್ರೇರಿತವಾಗಿ ಈ ನಿರ್ಧಾರವನ್ನು ಕೈಗೊಂಡಿದ್ದೇನೆ.ನನ್ನ ಆರಾಧ್ಯ ದೈವವಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪಾದದಾಣೆಯಾಗಿ ನನ್ನ ಈ ನಿರ್ಧಾರ ದೃಢ ಎಂದರು.
ಈ ಯೋಜನೆಯಿಂದ ಹಲವು ಕಡುಬಡವರಿಗೆ ಒಳ್ಳೆಯದಾಗಬಹುದು ಆದರೆ ನನ್ನ ವೈಯಕ್ತಿಕ ದೃಷ್ಟಿಯಿಂದ ಇದನ್ನು ನಿರಾಕರಿಸಿದ್ದೇನೆ ಎಂದರು.
ಕಾಂಗ್ರೆಸ್ಸಿನ ಈ ಐದು ಯೋಜನೆಗಳಿಗೆ ನನ್ನ ಧಿಕ್ಕಾರ ಎಂದಿರುವ ಅವರು,ಈ ರಾಜ್ಯ ಈ ದೇಶ, ಮುಂದಿನ ಐದು ವರ್ಷಗಳ ನಿಮ್ಮ ಆಡಳಿತ ಅವಧಿಯಲ್ಲಿ ಏನಾದರೂ ದಿವಾಳಿ ಆದರೆ, ಅದಕ್ಕೆ ನೇರ ನೀವೇ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಚ್ಚರಿಸಿದರು.
ನನ್ನ ಈ ನಿರ್ಧಾರ ನ್ಯಾವಾಗಿದ್ದರೆ ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಂತಹ ಸಂವಿಧಾನದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಇನ್ನೂ ಜೀವಂತವಿದ್ದಲ್ಲಿ ಇವುಗಳನ್ನು ಪರಿಶೀಲಿಸಲಿ.ನನ್ನ ಈ ನಿರ್ಧಾರದ ನಂತರ ಮತ್ತಷ್ಟು ಜನ ಈ ನಿರ್ಧಾರಕ್ಕೆ ಬಂದರೂ ಬರಬಹುದು ಎಂದರು.