ವಿಜಯ್ ನೋಡಲು ಟಿವಿಕೆ ಪಕ್ಷದ ಶಾಲು ಧರಿಸಿ ಹೋದ ಕಾನ್ಸ್​ಟೇಬಲ್: ಪೊಲೀಸ್ ಇಲಾಖೆ ನೀಡಿತು ಸಸ್ಪೆಂಡ್ ಲೆಟರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ (ಟಿವಿಕೆ) ಮುಖ್ಯಸ್ಥ ದಳಪತಿ ವಿಜಯ್ ಅವರನ್ನು ನೋಡಲು ಬಂದಿದ್ದ ಮಧುರೈನ ಪೊಲೀಸ್ ಕಾನ್ಸ್​ಟೇಬಲ್​​ ಕಥಿರವಣ್ ಮಾರ್ಕ್ಸ್ ಎಂಬುವರು ಟಿವಿಕೆ ರಾಜಕೀಯ ಪಕ್ಷದ ಶಾಲು ಧರಿಸಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಹಿರಿಯ ಪೊಲೀಸ್​ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ದಿಂಡಿಗಲ್ ಜಿಲ್ಲೆಯ ಕೊಡೈಕನಾಲ್ ಪ್ರದೇಶದಲ್ಲಿ ಕಳೆದ ಎರಡ್ಮೂರು ದಿನಗಳಿಂದ ನಡೆಯುತ್ತಿದ್ದ ‘ಜನ ನಾಯಕನ್’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲು ಖಾಸಗಿ ವಿಮಾನದ ಮೂಲಕ ವಿಜಯ್ ಮಧುರೈಗೆ ಆಗಮಿಸಿದ್ದರು. ಈ ವೇಳೆ ಅವರನ್ನು ನೋಡಲು ವಿಮಾನ ನಿಲ್ದಾಣದ ಮುಂದೆ ಟಿವಿಕೆ ಸ್ವಯಂಸೇವಕರು ಮತ್ತು ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಭದ್ರತೆಯಲ್ಲಿ ತೊಡಗಿದ್ದ ಪೊಲೀಸ್ ಕಾನ್ಸ್​ಟೇಬಲ್​​ ಕಥಿರವಣ್ ಮಾರ್ಕ್ಸ್, ತನಗೆ ತುರ್ತು ಕೆಲಸವಿದೆ ಎಂದು ಹೇಳಿ ತಮ್ಮ ಮೇಲಾಧಿಕಾರಿಯಿಂದ ಅನುಮತಿ ಕೋರಿ ಅಲ್ಲಿಂದ ನೇರವಾಗಿ ನಟ ವಿಜಯ್ ಅವರನ್ನು ಕಾಣಲು ಬಂದಿದ್ದರು. ಪೊಲೀಸ್​ ಸಮವಸ್ತ್ರವಿಲ್ಲದೆ ಮತ್ತು ಹೆಗಲ ಮೇಲೆ ಟಿವಿಕೆ ಪಕ್ಷದ ಧ್ವಜದೊಂದಿಗೆ ವಿಜಯ್ ಅವರನ್ನು ಸ್ವಾಗತಿಸುತ್ತಿರುವ ಕಥಿರವಣ್ ಅವರ ವಿಡಿಯೋಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಗಮನಿಸಿದ ಮಧುರೈ ನಗರ ಪೊಲೀಸ್ ಆಯುಕ್ತ ಲೋಗನಾಥನ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಪೊಲೀಸ್​ ಕಾನ್ಸ್​ಟೇಬಲ್​ ಕಥಿರವಣ್ ಮಾರ್ಕ್ಸ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!