ಹೊಸದಿಗಂತ ವರದಿ, ಚಿತ್ರದುರ್ಗ:
ಮನೆ ಕಟ್ಟುವುದು ಬಹಳ ಕಷ್ಟದ ಕೆಲಸ. ಹಾಗಾಗಿ ಸರ್ಕಾರ ಬಡವರಿಗೆ ಮನೆಗಳನ್ನು ಕಟ್ಟಿಸಿ ಕೊಡುತ್ತಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಮೊಳಕಾಲ್ಮುರು ಪಟ್ಟಣದಲ್ಲಿ ೩೩.೫೦ ಕೋಟಿ ರೂ. ವೆಚ್ಚದಲ್ಲಿ ೫೦೦ ವಸತಿ ರಹಿತ ಕೊಳಗೇರಿ ನಿವಾಸಿಗಳಿಗೆ ಸೂರು ಕಲ್ಪಿಸಲು ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸೂರಿಲ್ಲದ ಜನರಿಗೆ ಸೂರು ನೀಡುವ ಉದ್ದೇಶದಿಂದ ಪ್ರಧಾನಿಮಂತ್ರಿ ಆವಾಜ್ ಯೋಜನೆ ಕಾರ್ಯಕ್ರಮದ ಮೂಲಕ ಮೂಲಕ ವಿಶೇಷವಾಗಿ ಮೊಕಾಳಮುರು ವಿಧಾನಸಭಾ ಕ್ಷೇತ್ರಕ್ಕೆ ೫೦೦ ಮನೆಗಳನ್ನು ನೀಡುವಂತಹ ಕೆಲಸ ಮಾಡಲಾಗಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಈ ಭಾಗದಲ್ಲಿರುವ ಜನರಿಗೆ ಅನುಕೂಲವಾಗಬೇಕು ಎಂದು ಪ್ರಮಾಣಿಕ ಪ್ರಯತ್ನ ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮಾಡುತ್ತಿದ್ದಾರೆ. ಮೊಳಕಾಲ್ಮುರು ಸುಂದರ ಪಟ್ಟಣವಾಗಿ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದರು.
ಮೊಳಕಾಲ್ಮುರು ಪಟ್ಟಣ ಸೇರಿದಂತೆ ಕ್ಷೇತ್ರದಲ್ಲಿ ೩೦೦ ಕೋಟಿ ರೂ. ಕಾಮಗಾರಿಗೆ ನಡೆಯುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ, ಬೀದಿದೀಪ, ವಿದ್ಯುತ್, ಬಸ್ ಡಿಪೋ ನಿರ್ಮಾಣ, ತಾಲ್ಲೂಕು ವಿಧಾನಸೌಧ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಕ್ಷೇತ್ರ ವ್ಯಾಪ್ತಿಯ ಸುಮಾರು ೭೮ ಕೆರೆಗಳಿಗೆ ನೀರು ಹಾಗೂ ತುಂಗಾಭದ್ರ ಹಿನ್ನೀರಿನ ಮೂಲಕ ಎಲ್ಲಾ ಗ್ರಾಮಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ೧೦ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಭೂಮಿಪೂಜೆ ಹಾಗೂ ಕೋವಿಡ್ ಸೊಂಕಿನಿಂದ ಮೃತಪಟ್ಟ ೧೧ ಕುಟುಂಬದವರಿಗೆ ತಲಾ ೧ ಲಕ್ಷ ಪರಿಹಾರ ವಿತರಣೆ ಮಾಡಲಾಯಿತು.