ಹೊಸದಿಗಂತ ವರದಿ, ಚಿಕ್ಕಮಗಳೂರು:
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಮಂಜೂರು ಮಾಡಿದ್ದ ೬೨೫೯೨ ಮನೆಗಳಿಗೆ ಒಂದು ರೂ. ಹಣ ಬಿಡುಗಡೆ ಮಾಡಿರಲಿಲ್ಲ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಅಗತ್ಯ ಹಣ ಬಿಡುಗಡೆ ಮಾಡಿ ೩೯೦೭೯ ಮನೆಗಳನ್ನ ನಿರ್ಮಾಣ ಮಾಡಿ ಮುಗಿಸಿದ್ದೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಬಿಜೆಪಿ ಸರ್ಕಾರ ಒಂದು ಮನೆಯನ್ನೂ ಕೊಟ್ಟಿಲ್ಲ, ಒಂದು ರೂ. ಸಹ ಬಿಡುಗಡೆ ಮಾಡಿಲ್ಲ ಎಂದು ಪದೇ ಪದೇ ಸಿದ್ದರಾಮಯ್ಯ ಹೇಳುತ್ತಾರೆ. ಅವರು ಅವರು ಎಲ್ಲರಿಗೂ ಒಂದೇ ಭಾಷೆ ಉಪಯೋಗಿಸುತ್ತಾರೆ. ಅದನ್ನು ಬಿಟ್ಟು ವಾಸ್ತವಾಂಶಕ್ಕೆ ಆಧ್ಯತೆ ಕೊಡಬೇಕು. ಮುಂಬರುವ ಮಾರ್ಚ್ ೩೦ ರೊಳಗಾಗಿ ಮತ್ತೆ ೬೭೭೬ ಮನೆಗಳನ್ನು ಪೂರ್ಣಗೊಳಿಸುತ್ತಿದ್ದೇವೆ ಎಂದರು.
ನಗರ ಪ್ರದೇಶದಲ್ಲಿ ೨೧೩೧ ಮನೆಗಳನ್ನು ಸಿದ್ದರಾಮಯ್ಯ ಅವಧಿಯಲ್ಲಿ ಕೊಟ್ಟಿದ್ದರು. ಆದರೆ ಮಂಜೂರು ಮಾಡಿದರೆ ಸಾಕೆ ಅದನ್ನು ಪೂರ್ಣಗೊಳಿಸಬೇಕಿರುವುದು ನಂತರ ಬರುವ ಸರ್ಕಾರದ ಜವಾಬ್ದಾರಿ. ೨೦೦೪ ರಲ್ಲಿ ಮಂಜೂರಾದ ಮನೆಗಳೂ ಸಹ ಇನ್ನೂ ನಿರ್ಮಾಣವಾಗಿರಲಿಲ್ಲ. ಈಗ ನಾವು ತಾರ್ಕಿಕ ಅಂತ್ಯಕ್ಕೆ ತಂದಿದ್ದೇವೆ ಎಂದು ತಿಳಿಸಿದರು.