ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಅಡ್ಡಿ ಸರಿಯಲ್ಲ: ಶಾಸಕ ಬೋಪಯ್ಯ ಅಸಮಾಧಾನ

ಹೊಸ ದಿಗಂತ ವರದಿ, ಮಡಿಕೇರಿ:

ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಪಾಲೆಮಾಡುವಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿರುವುದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಪೊಲೀಸ್ ರಕ್ಷಣೆಯಲ್ಲಿ ಕಾಮಗಾರಿ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಕ್ರೀಡಾ ಪಟುಗಳ ತವರೂರು ಎಂದು ಖ್ಯಾತಿ ಪಡೆದಿದ್ದು, ಹಲವು ಕುಟುಂಬ, ಸಂಘ ಸಂಸ್ಥೆಗಳು ಹಾಗೂ ಯುವ ಸಮೂಹ ಕ್ರೀಡೆಗಳ ಕಡೆ ಆಸಕ್ತರಾಗಿದ್ದಾರೆ. ಆದರೆ ಕೊಡಗಿನಲ್ಲಿ ಸುಸಜ್ಜಿತ ಕ್ರಿಕೆಟ್ ಮೈದಾನದ ಕೊರತೆ ಇದ್ದು, ಇದೀಗ ನಿರ್ಮಾಣ ಕಾರ್ಯಕ್ಕೂ ಅಡ್ಡಿಪಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2011ರಲ್ಲಿ ಕ್ರಿಕೆಟ್ ಸಂಸ್ಥೆಗೆ ಸ್ಟೇಡಿಯಂ ನಿರ್ಮಾಣ ಮಾಡಲು ಜಾಗ ಮಂಜೂರಾಗಿದೆ. ಅಲ್ಲದೆ ಸ್ವಂತ ಬಂಡವಾಳದಿಂದಲೇ ಸ್ಟೇಡಿಯಂ ನಿರ್ಮಾಣ ಮಾಡಲು ಕ್ರಿಕೆಟ್ ಸಂಸ್ಥೆ ಮುಂದಾಗಿದೆ. ಆದರೆ ಮೈದಾನದ ಅಭಿವೃದ್ಧಿ ಕಾರ್ಯಕ್ಕೆ ಜಾತಿ ಹೆಸರಿನಲ್ಲಿ ಅಡ್ಡಿಪಡಿಸಲಾಗುತ್ತಿದ್ದು, ಇದು ಸರಿಯಾದ ಕ್ರಮವಲ್ಲ ಎಂದರು.
ಪಾಲೆಮಾಡು ನಿವಾಸಿಗಳು ಸ್ಮಶಾನಕ್ಕಾಗಿ ಕೇವಲ 1 ಎಕರೆ ಜಾಗವನ್ನು ಕೋರಿದ್ದರು. ಆದರೆ ಸರ್ಕಾರದಿಂದ 2 ಎಕರೆ ಜಾಗವನ್ನು ಈಗಾಗಲೇ ಮಂಜೂರು ಮಾಡಿ ನೀಡಲಾಗಿದೆ. ಹೊರಗಿನಿಂದ ಬಂದ ವ್ಯಕ್ತಿ ಅಭಿವೃದ್ಧಿಗೆ ಅಡ್ಡಿ ಪಡಿಸುತ್ತಿದ್ದಾರೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಹಾಗೂ ಪೊಲೀಸರಿಗೆ ಸೂಚಿಸಲಾಗಿದ್ದು, ಪೊಲೀಸ್ ರಕ್ಷಣೆಯಲ್ಲಿ ಮೈದಾನ ಕಾಮಗಾರಿ ನಡೆಯಲಿದೆ ಎಂದು ಬೋಪಯ್ಯ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!